ನವದೆಹಲಿ : ಕಳೆದ 64 ವರ್ಷಗಳಿಂದಿರುವ ಯೋಜನಾ ಆಯೋಗವನ್ನು ರದ್ದು ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಯೋಜನಾ ಆಯೋಗದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಕಳೆದ 64 ವರ್ಷಗಳಿಂದಲೂ ಯೋಜನಾ ಆಯೋಗ ಅಸ್ತಿತ್ವದಲ್ಲಿದೆ. ಇಂತಹ ಸುದೀರ್ಘ ಇತಿಹಾಸವನ್ನು ಹೊಂದಿರುವ ಯೋಜನಾ ಆಯೋಗವನ್ನು ರದ್ದು ಮಾಡುವುದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ ಎಂದು ಹೇಳಿದರು.
ಯೋಜನಾ ಆಯೋಗವನ್ನು ರದ್ದು ಪಡಿಸುವ ಬದಲಿಗೆ ಈಗಿರುವ ಆಯೋಗವನ್ನು ಬದಲಿಸಿ, ಅದಕ್ಕೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಬಲಪಡಿಸಬೇಕು. ಯೋಜನಾ ಆಯೋಗದಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಆಯೋಗದ ರದ್ಧತಿಗೆ ಕೇವಲ ಕಾಂಗ್ರೆಸ್ ಸರ್ಕಾರವಿರುವ ಮುಖ್ಯಮಂತ್ರಿಗಳಲ್ಲದೇ ಪಶ್ಚಿಮ ಬಂಗಾಳ ಮತ್ತು ಬಿಹಾರ ಸರ್ಕಾರಗಳು ಕೂಡ ವಿರೋಧ ವ್ಯಕ್ತರಪಡಿಸಿವೆ. ಹೀಗಾಗಿ ಆಯೋಗದ ರದ್ಧತಿ ಚಿಂತನೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಮನವಿ ಮಾಡಿದರು.