Untitled Document
Sign Up | Login    
Dynamic website and Portals
  
September 10, 2016

ಕಾವೇರಿ ಜಲ ವಿವಾದ: ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಕಾವೇರಿ ಜಲ ವಿವಾದ: ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕಾವೇರಿ ಜಲ ವಿವಾದದ ಕಗ್ಗಂಟನ್ನು ಬಗೆಹರಿಸಲು ಕಾವೇರಿ ಪಾತ್ರದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಶೀಘ್ರವೇ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಸ್ಥಿತಿಯ ಗಂಭೀರತೆಯ ಹಿನ್ನೆಲೆಯಲ್ಲಿ ಕೆಲವೇ ತಾಸುಗಳ ಸೂಚನೆಯಲ್ಲಿ ಸಭೆಯನ್ನು ಆಯೋಜಿಸಿ, ದೂರವಾಣಿ, ಫ್ಯಾಕ್ಸ್ ಅಥವಾ ಮಿಂಚಂಚೆಯ ಮೂಲಕ ಈ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.

ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಮಟ್ಟ ಕುಸಿದಿರುವ ಸಂದರ್ಭದಲ್ಲಿ ಕಾವೇರಿ ನದಿಯಿಂದ ತಮಿಳುನಾಡಿಗೆ ಬಿಳಿಗುಂಡ್ಲು ಅಂತಾರಾಜ್ಯ ಗಡಿಯಿಂದ 15,000 ಕ್ಯೂಸೆಕ್ಸ್ ನೀರು ಕೊಡುವಂತೆ ಭಾರತದ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪು ಬೆಂಗಳೂರು ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲು ಮಾತ್ರವಲ್ಲ ಕಾವೇರಿ ಕೊಳ್ಳದಲ್ಲಿ ಒಂದೇ ಬೆಳೆ ಬೆಳೆಯುವ ರಾಜ್ಯದ ರೈತರಿಗೂ ನೀರು ಕೊಡಲಾಗದ ಪರಿಸ್ಥಿಯನ್ನು ನಿರ್ಮಾಣ ಮಾಡಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿನ ಪ್ರಸ್ತುತ ಸಂಗ್ರಹ ಹಾಗೂ ಈಶಾನ್ಯ ಮುಂಗಾರು ಈಗಾಗಲೇ ಬಿತ್ತನೆಯಾಗಿರುವ ಹಾಗೂ ನಂತರವೂ ಬಿತ್ತನೆಯಾಗಲಿರುವ ಅಲ್ಲಿನ ಸಾಂಬಾ ಭತ್ತದ ಬೆಳೆಯ ಅಗತ್ಯವನ್ನು ಪೂರೈಸುತ್ತದೆ.

ರಾಜ್ಯದಲ್ಲಿ ಸೆಪ್ಟೆಂಬರ್ 6 ರಂದು ನಡೆದ ಸರ್ವ ಪಕ್ಷಗಳ ಮುಖಂಡರ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಸಂವಿಧಾನಾತ್ಮಕವಾಗಿ ರಾಜ್ಯ ಮುಖ್ಯ ಕಾರ್ಯ ನಿರ್ವಾಹಕನಾಗಿ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಿ, ಅದರಂತೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದೆ. ಸರ್ಕಾರದ ಈ ಕ್ರಮ ರಾಜ್ಯದಲ್ಲಿ ಅಶಾಂತ ವಾತಾವರಣವನ್ನು ಸೃಷ್ಠಿಸಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ, ರಾಜ್ಯದ ಆರ್ಥಿಕತೆಯ ಮೇಲೆ, ವಿಶೇಷವಾಗಿ ರಾಷ್ಟ್ರಕ್ಕೆ ಅತ್ಯಧಿಕ ಆದಾಯ ಹಾಗೂ ವಿದೇಶೀ ವಿನಿಮಯ ತರುವ ಮಾಹಿತಿ ತಂತ್ರಜ್ಞಾನದ ಆರ್ಥಿಕತೆಯ ಮೇಲೆ, ಗಂಭೀರ ಪರಿಣಾಮ ಬೀರಲಿದೆ. ಅಲ್ಲದೆ, ಜನಸಾಮಾನ್ಯರ ದೈನಂದಿನ ಬದುಕಿಗೂ ತೀವ್ರ ಹೊಡೆತ ಬೀಳಲಿದೆ.

ಆದಕಾರಣ, ದೇಶದ ಪ್ರಧಾನ ಮಂತ್ರಿಯಾಗಿ ಮಾತ್ರವಲ್ಲ, ಇಡೀ ಒಕ್ಕೂಟದ ವ್ಯವಸ್ಥೆಯ ಮುಖ್ಯಸ್ಥರಾಗಿ ಕೆಲವೇ ತಾಸುಗಳ ಸೂಚನೆ ನೀಡಿ ಮುಖ್ಯಮಂತ್ರಿಗಳ ಸಭೆ ಕರೆಯಿರಿ. ಕಾವೇರಿ ನದಿಯಲ್ಲಿ ಒಳ ಹರಿವಿನ ಕೊರತೆ ಇದ್ದ ಇಂತಹುದೇ ಸಂದರ್ಭದಲ್ಲಿ, 1995 ರ ಡಿಸೆಂಬರ್ 28 ರ ಸರ್ವೋಚ್ಛ ನ್ಯಾಯಾಲಯದ ಕೋರಿಕೆಗೆ ಸ್ಪಂದಿಸಿ ಅಂದಿನ ಪ್ರಧಾನ ಮಂತ್ರಿಯವರು ತಮ್ಮ ಅಧ್ಯಕ್ಷತೆಯಲ್ಲಿ ಕಾವೇರಿ ಪಾತ್ರದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವಲ್ಲಿ ಎಲ್ಲಾ ಪಕ್ಷಗಳನ್ನು ತೃಪ್ತಿಪಡಿಸಿರುವ ಉದಾಹರಣೆ ನಮ್ಮ ಮುಂದಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited