ಬೆಂಗಳೂರು : ಭಾರತೀಯ ಸೇನೆ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಭಟನೆ ವ್ಯಕ್ತಪಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ನಿಂದ ನಡೆದ ಕಾಶ್ಮೀರ ಸಂಘರ್ಷ ಕುರಿತಾದ ಕಾರ್ಯಾಗಾರದಲ್ಲಿ ಭಾರತೀಯ ಸೇನೆ ವಿರುದ್ಧ ಘೋಷಣೆಗಳನ್ನು ಕೂಗಲಾಗಿದ್ದು, ಸೇನೆಯಿಂದ ಸ್ವಾತಂತ್ರ್ಯ ನೀಡುವಂತೆ ಘೋಷಣೆಗಳನ್ನು ಕೂಗಲಾಗಿದೆ.
ಉಗ್ರ ಬುರ್ಹಾನ್ ವನಿಯನ್ನು ಹುತಾತ್ಮ, ಹೀರೊ ಎಂಬಂತೆ ಬಿಂಬಿಸಿ ಘೋಷಣೆಗಳನ್ನು ಕೂಗಲಾಗಿದೆ. ಮಾಹಿತಿಗಳ ಪ್ರಕಾರ, ಕಾಶ್ಮೀರದಿಂದ ಬಂದಿದ್ದ ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತೀಯ ಸೇನೆ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿವೆ.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರೊಬ್ಬರು ಭಾರತೀಯ ಸೇನೆಯ ಪರವಾಗಿ ಮಾತನಾಡಿದ್ದಕ್ಕೆ ಕೆಂಡಾಮಂಡಲರಾದ ಯುವಕರ ಗುಂಪೊಂದು ಸಭಿಕರ ಮೇಲೆ ದಾಳಿ ನಡೆಸಲು ಮುಂದಾದ ಘಟನೆಯು ನಡೆದಿದೆ.
ಜೆಎನ್ ಯು ಮಾದರಿಯಲ್ಲೇ ಜಾನ್ ಸೆ ಲೇಂಗೆ ಆಜಾದಿ, ಇಂಡಿಯನ್ ಆರ್ಮಿ ಸೆ ಹಮ್ ಚಾಹಿಯೇ ಆಜಾದಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಸ್ಥಳದಲ್ಲೇ ಇದ್ದ ಎಬಿವಿಪಿ ಕಾರ್ಯಕರ್ತರು ದೇಶ ವಿರೋಧಿ ಘೋಷಣೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆ ಕೂಗಿರುವುದು ಹಾಗೂ ಅವರ ಪ್ರತಿಭಟನೆಗಳನ್ನು ವಿಡಿಯೋ ಮಾಡಿದ್ದು ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದೇವೆ ಎಂದು ಎಬಿವಿಪಿ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಬಿಗಿ ಬಂದೋಬಸ್ತ್ ನಲ್ಲಿ ಕಾರ್ಯಕ್ರಮ ನಡೆಯಿತಾದರೂ ಕೊನೆಯ ಘಳಿಗೆಯಲ್ಲಿ ಸೇನೆಯ ವಿರುದ್ಧ ಘೋಷಣೆ ಕೂಗಿ ಗದ್ದಲವೆಬ್ಬಿಸಲು ಮುಂದಾಗಿದ್ದಾರೆ. ತಕ್ಷಣ ಪೊಲೀಸರು ಕಾರ್ಯಕ್ರಮವನ್ನು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.