ನವದೆಹಲಿ : ಆರು ತಿಂಗಳಾದರೂ ಕಪ್ಪುಹಣ ತರಲು ವಿಫಲವಾಗಿರುವುದರ ವಿರುದ್ಧ ಪ್ರತಿಪಕ್ಷಗಳು ಟೀಕಾ ಪ್ರಹಾರ ನಡೆಸುತ್ತಿರುವ ಸಂದರ್ಭದಲ್ಲೇ, ಅಧಿಕಾರಕ್ಕೇರಿದ ನೂರು ದಿನದೊಳಗೆ ಕಪ್ಪುಹಣ ತರುವುದಾಗಿ ತಾನೆಂದೂ ಹೇಳಿಯೇ ಇಲ್ಲ ಎಂದು ಕೇಂದ್ರ ಸರ್ಕಾರ ಉಲ್ಟಾ ಹೊಡೆದಿದೆ.
ಕಪ್ಪುಹಣ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು, ಕಪ್ಪುಹಣ ಸಮಸ್ಯೆ ಎದುರಿಸಲು ಕಾರ್ಯಪಡೆಯೊಂದನ್ನು ರಚಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಎಲ್ಲ ಕಪ್ಪುಹಣವನ್ನು ಅಧಿಕಾರಕ್ಕೇರಿದ 100 ದಿನದೊಳಗೆ ತರುತ್ತೇವೆ ಎಂದು ಹೇಳುವಷ್ಟು ನಾವೇನು ಅಪ್ರಬುದ್ಧರಲ್ಲ ಎಂದು ಹೇಳಿದರು.
ನಾವು ಎಂದಾದರೂ ಕಪ್ಪುಹಣಕ್ಕೆ ಸಂಬಂಧಿಸಿದಂತೆ 100 ದಿನದ ಪದ ಉಲ್ಲೇಖ ಮಾಡಿದ್ದರೆ ಅದರರ್ಥ, ಅಧಿಕಾರಕ್ಕೆ ಬಂದ 100 ದಿನದೊಳಗೆ ಕಪ್ಪುಹಣ ತರುವ ಪ್ರಕ್ರಿಯೆ ಆರಂಭಿಸುತ್ತೇವೆ ಎಂಬುದಾಗಿತ್ತು. ಕಪ್ಪುಹಣವನ್ನು 100 ದಿನದೊಳಗೆ ತರುವುದಾಗಿ 2009ರ ಜುಲೈನಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ಮೊದಲ ಬಾರಿಗೆ ಹೇಳಿದ್ದರು ಎಂದು ತಿಳಿಸಿದರು.
ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕಪ್ಪುಹಣವನ್ನು ವಾಪಸ್ ತರುವ ಭರವಸೆ ಇಲ್ಲದೇ ಇರಬಹುದು. ಆದರೆ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರು ಕಪ್ಪುಹಣವನ್ನು ವಾಪಸ್ ತರುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ನಡುವೆ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್, ಕಪ್ಪುಹಣ ತರುವುದಾಗಿ ಬಿಜೆಪಿ ನೀಡಿದ್ದ ವಾಗ್ಧಾನವನ್ನು ಜನ ನಂಬಿದ್ದಾರೆ. ಹೀಗಾಗಿ ಯಾವಾಗ ಕಪ್ಪು ಹಣವನ್ನು ತರಲಾಗುತ್ತದೆ ಎಂಬ ಬಗ್ಗೆ ಸರ್ಕಾರ ತಿಳಿಸಬೇಕು. ಕಪ್ಪುಹಣ ವಾಪಸ್ ಬಂದರೆ ತಮಗೆ ತಲಾ 15 ಲಕ್ಷ ರೂ. ಸಿಗುತ್ತದೆ ಎಂದು ದೇಶದ ಯುವಕರು ನಂಬಿದ್ದಾರೆ. ನೀವು ಜನತೆಗೆ ಕನಸುಗಳನ್ನು ಮಾಡಿದ್ದೀರಿ ಎಂದು ಛೇಡಿಸಿದರು.
ಲೋಕಸಭೆಯಲ್ಲಿ ಕಪ್ಪುಹಣದ ಕುರಿತು ಉತ್ತರ ವಿತ್ತ ಸಚಿವ ಅರುಣ್ ಜೇಟ್ಲಿ, 2015ರ ಮಾರ್ಚ್ 31ರೊಳಗೆ ಕಪ್ಪುಹಣ ಇಟ್ಟ ಎಲ್ಲ 427 ಜನರ ವಿರುದ್ಧ ತನಿಖೆ ಪೂರ್ಣಗೊಳಿಸುವ ಭರವಸೆ ನೀಡಿದರು. ಅಲ್ಲದೆ ತೆರಿಗೆ ಸ್ನೇಹಿತ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಈ ಮೂಲಕ ದೇಶದ ಹಣ ವಿದೇಶಗಳಿಗೆ ಹೋಗದಂತೆ ತಡೆಯುವ ಯತ್ನ ಮಾಡಲಾಗುವುದು ಎಂದು ಹೇಳಿದರು.