ನವದೆಹಲಿ : ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನ ಮಂತ್ರಿಗಳಾದ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ಸಂಸತ್ತಿನ ಕಾರ್ಯ ಕಲಾಪಗಳು ಶಾಂತಿಯುತವಾಗಿ ಮತ್ತು ಜವಾಬ್ದಾರಿಯುತವಾಗಿ ನಡೆಸಲು ಅವಕಾಶ ಮಾಡಿ ಕೊಡಿ ಎಂದು ಹೇಳಿದರು.
ನಾವು ಸಂಸತ್ತಿನ ಸಂಪ್ರದಾಯವನ್ನು ಎತ್ತಿ ಹಿಡಿದರೆ ಉತ್ತಮ. ಸಂಸತ್ತಿನ ವಿಧಾನವನ್ನು ಅನುಸರಿಸಿದಲ್ಲಿ ಚರ್ಚೆ ಹೆಚ್ಚು ಫಲಕಾರಿಯಾಗುತ್ತದೆ. ಇದು ನನ್ನ ಮಾತುಗಳಲ್ಲ. ಇದನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಗಾಂಧಿ ಅವರ ಮಾತನ್ನು ಉಲ್ಲೇಖಿಸಿದರು. ಗುರುವಾರ, ಪ್ರಧಾನಿ ಮೋದಿ ಅವರು ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುತ್ತಾ ಲೋಕಸಭೆಯಲ್ಲಿ ಮಾತನಾಡುತ್ತ ಈ ಮಾತನ್ನು ಹೇಳಿದರು.
ಪ್ರಧಾನಿ ಮೋದಿ ಅವರು ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಸಂಸತ್ತಿನ ಭಾಷಣವನ್ನು ಉಲ್ಲೇಖಿಸಿ, ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ ಕೆಲವು ಶಾಸನಗಳ ಅಂಗೀಕಾರಕ್ಕೆ ಸಹಕರಿಸುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದರು.
ಸದನದಲ್ಲಿ ಸಭ್ಯವಾಗಿ ನಡೆದುಕೊಂಡರೆ ನಾವು ಉತ್ತಮ ರೀತಿಯಲ್ಲಿ ನಮ್ಮ ಯೋಚನೆಗಳನ್ನು ಮುಂದಿಡಬಹುದು ಎಂದು ಪ್ರಧಾನಿ ಹೇಳಿದರು.
ಸಂಸತ್ತಿನಲ್ಲಿ ನಿರಂತರ ಅಡೆತಡೆಗಳು ಪ್ರತಿಪಕ್ಷದವರ ಕೀಳರಿಮೆಯ ಪರಿಣಾಮ. ಕೆಲವೊಬ್ಬರಿಗೆ ಅರ್ಥವಾಗದಿದ್ದರೂ, ವಿರೋಧಿಸಬೇಕೆಂಬ ಕಾರಣಕ್ಕಾಗಿ ವಿರೋಧಿಸುತ್ತಾರೆ. ಪ್ರತಿಪಕ್ಷದಲ್ಲಿ ಉತ್ತಮ ಸಂಸದರಿದ್ದಾರೆ. ಆದರೆ ಅವರಿಗೆ ಮಾತನಾಡಲು ಅವಕಾಶಗಳಿಲ್ಲ ಎಂದು ಕಾಂಗ್ರಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ 1974ರಲ್ಲಿ ಇಂದ್ರಪ್ರಸ್ಥ ಕಾಲೇಜಿನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ ಯಾರೂ ಒಂದು ದೇಶವನ್ನು ದುರ್ಬಲ ಎಂದು ಹೇಳಲು ಬಿಡಬಾರದು ಎನ್ನುವುದನ್ನು ಉಲ್ಲೇಖಿಸಿದ ಪ್ರಧಾನಿ, ಕೆಲವು ಶಾಸನಗಳ ಅಂಗೀಕಾರಕ್ಕೆ ಸಹಕರಿಸುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದರು.
ಜಿ ಎಸ್ ಟಿ ಬಿಲ್ ನಿಮ್ಮದೇ (ಕಾಂಗ್ರೆಸ್) ಬಿಲ್, ಆದರೂ ನೀವೇ ಅದನ್ನು ವಿರೋಧಿಸುತ್ತೀರಿ. ಬಡತನ ದೇಶದಲ್ಲಿ ಎಷ್ಟು ಬೇರೂರಿದೆ, ಆ ಸಮಸ್ಯೆಯನ್ನು ನಿಭಾಯಿಸಲು ಹೊರಟರೆ ನಮ್ಮನ್ನೇ ಬುಡಮೇಲು ಮಾಡುತ್ತೀರಿ. ಪ್ರತಿಪಕ್ಷಗಳಿಗೆ ನಾವು ಏಕೆ ಅವರಿಗಿಂತ ಉತ್ತಮ ಕೆಲಸ ಮಾಡುತ್ತಿದ್ದೇವೆಂದು ಚಿಂತೆಯಾಗಿದೆ. ನೀವೇ (ಕಾಂಗ್ರೆಸ್) ಬಡತನದ ಬೀಜ ಬಿತ್ತಿದವರು. ಮನ್ರೇಗಾ, ನರೇಗಾದಂತಹ ಯೋಜನೆಗಳನ್ನು ಕಡಿಮೆ ಅವಶ್ಯಕತೆ ಇರುವ ರಾಜ್ಯಗಳಿಗೆ ನೀಡಲಾಗಿದೆ. 60 ವರ್ಷಗಳಲ್ಲಿ ಕಾಂಗ್ರೆಸ್ ಬಡವರಿಗೆ ಸಹಾಯ ಮಾಡಿದ್ದರೆ ಅವರು ಇನ್ನೂ ಸಂಕಷ್ಟದಲ್ಲಿರುತ್ತಿರಲಿಲ್ಲ. ಮನ್ರೇಗಾ ನಮ್ಮ ಯಶಸ್ಸಿನ ಸಂಕೇತ ಅಲ್ಲ ಎಂದು ನಾವು ಒಪ್ಪಬೇಕು ಎಂದರು.
ಪ್ರತೀ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶದೊಂದಿಗೆ ಜನರ ಸೇವೆ ಮತ್ತು ಪ್ರಗತಿಗಾಗಿ ಸರ್ಕಾರ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಎನ್ ಡಿ ಎ ಸರ್ಕಾರ ತೋರಿಸಿಕೊಟ್ಟಿದೆ. ಫಸಲ್ ಭೀಮಾ ಯೋಜನೆ ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತ ಎಂದು ಸಂಸದರೊಬ್ಬರು ಹೇಳಿದ್ದರು. ಆದರೆ ನಾನು ಹೇಳುತ್ತೇನೆ, ಅದು ಎಲ್ಲಾ ಕಡೆಗಳಿಗೂ ಅನ್ವಯಿಸುತ್ತದೆ. ನಮಗೆ ಹೊಸ ವಿಚಾರಗಳು ಸಂಸತ್ತಿಗೆ ಬೇಕು. ಸಂಸತ್ತಿನಲ್ಲಿ ಕೇವಲ ಹೊಸ ಸಂಸದರು ಮಾತ್ರ ಮಾತನಾಡಲು ಒಂದು ವಾರ ಅವಕಾಶ ನೀಡಬೇಕೆಂದು ಪ್ರಧಾನಿ ಅಭಿಪ್ರಾಯಪಟ್ಟರು.
ರಾಹುಲ್ ಗಾಂಧಿಯ ಹೆಸರು ಹೇಳದೆ, ಪ್ರಧಾನಿ ನರೇಂದ್ರ ಮೋದಿ ಅವರು, "ಕೆಲವರು ವಯಸ್ಸಿನ ಜೊತೆ ಕಲಿಯಲು ಇಷ್ಟವಿಲ್ಲದವರಂತೆ ತೋರುತ್ತಾರೆ. ಕೆಲವರು ವಯಸ್ಸು ಹೆಚ್ಚಿದಂತೆ ಕಲಿಯುತ್ತಾರೆ, ಕೆಲವರು ಇಲ್ಲ" ಎಂದು ವಾಗ್ದಾಳಿ ನಡೆಸಿದರು.
ಮೇಕ್ ಇನ್ ಇಂಡಿಯಾ ಯೋಜನೆಯ ಬಗ್ಗೆ ಅಪಹಾಸ್ಯ ಮಾಡಿದ ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮುಂದುವರೆಸಿ, ಪ್ರಧಾನಿ ಮೋದಿ ಅವರು, ನಾವು ಯಾಕೆ ಮೇಕ್ ಇನ್ ಇಂಡಿಯಾ ದಂತ ಯೋಜನೆಯನ್ನು ಅಪಹಾಸ್ಯ ಮಾಡುತ್ತಿದ್ದೇವೆ. ಅದು ದೇಶಕ್ಕಾಗಿ. ಅದರಲ್ಲೇನಾದರೂ ಕುಂದು ಕೊರತೆಗಳಿದ್ದರೆ ಅವುಗಳನ್ನು ಚರ್ಚೆ ನಡೆಸಿ ಸರಿಪಡಿಸಬೇಕೆಂದರು.