ಬೆಂಗಳೂರು : ಸಾರ್ವಜನಿಕ ಹಿತದೃಷ್ಟಿಯಿಂದ ಪ್ರತಿನಿತ್ಯ ನಾಲ್ಕು ಗಂಟೆಗಳ ಕಾಲ ಕಡ್ಡಾಯವಾಗಿ ಸದನದ ಕಾರ್ಯಕಲಾಪಗಳು ನಡೆಯಬೇಕು ಎಂದು ವಿಧಾನಮಂಡಲ ನಿಯಮಾವಳಿ ತಿದ್ದುಪತಿ ಜಂಟಿ ಸಮಿತಿಯ ಅಧ್ಯಕ್ಷ ಹಾಗೂ ವಿಧಾನಸಭೆಯ ಅಧ್ಯಕ್ಷರೂ ಆದ ಕೆ.ಬಿ. ಕೋಳಿವಾಡ ತಿಳಿಸಿದ್ದಾರೆ.
ವಿಧಾನಮಂಡಲ ನಿಯಮಾವಳಿ ತಿದ್ದುಪಡಿ ಜಂಟಿ ಸದನ ಸಮಿತಿಯ ಮೊದಲ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಕೆ.ಬಿ. ಕೋಳಿವಾಡ ಸದನ ವರ್ಷಕ್ಕೆ ಕನಿಷ್ಠ 60 ದಿನಗಳು ನಡೆಯಬೇಕು ಎಂಬುದು ಸಮಿತಿಯ ಉದ್ದೇಶವಾಗಿದ್ದು, ಸದನ ಆರಂಭದಲ್ಲೇ ಪ್ರಶ್ನೋತ್ತರ ಕಲಾಪ ನಡೆಸಲು ಆದ್ಯತೆ ನೀಡಲು ಸಮಿತಿಯು ತೀರ್ಮಾನಿಸಿತು ಎಂದರು.
ಸದನದ ನಿಯಾವಳಿಗಳಿಗೆ ತಿದ್ದುಪಡಿ ಮಾಡಲು ಹಾಗೂ ನಿಯಮಾವಳಿಗಳನ್ನು ಆಧ್ಯಯನ ಮಾಡಲು ವಿಧಾನ ಪರಿಷತ್ ಸದಸ್ಯ ರಾಮಚಂದ್ರೇಗೌಡ ಅವರ ಅಧ್ಯಕ್ಷತೆಯಲ್ಲಿ ಏಳು ಸದಸ್ಯರ ಉಪ ಸಮಿತಿಯೊಂದನ್ನು ರಚಿಸಲಾಗಿದ್ದು ಮೂರು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಉಪ ಸಮಿತಿ ವರದಿ ಬಂದ ಮೇಲೆ ವರದಿಯ ಬಗ್ಗೆ ನಾವು ಮತ್ತೆ ಸಭೆ ಸೇರಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಬೆಳಗಾವಿಯಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವರದಿ ಮಂಡಿಸಿ ಒಪ್ಪಿಗೆ ಪಡೆದು ಹೊಸ ನಿಯಾಮವಳಿ ಪ್ರಕಾರವೇ ಸದನ ನಡೆಯಬೇಕು ಎಂಬುದು ಸಮಿತಿಯ ಉದ್ದೇಶವಾಗಿದೆ ಎಂದು ಅಧ್ಯಕ್ಷ ಕೆ.ಬಿ. ಕೋಳಿವಾಡ ತಿಳಿಸಿದರು.