ನವದೆಹಲಿ : ಕೆಲವೇ ದಿನಗಳ ಹಿಂದೆ ರೈಲ್ವೆ ಖಾತೆಯನ್ನು ಕಳೆದುಕೊಂಡ ಕರ್ನಾಟಕಕ್ಕೆ ಈಗ ಮತ್ತೂಂದು ಹಿನ್ನಡೆ ಎದುರಾಗಿದೆ. ಇದುವರೆಗೂ ಕಾಮಗಾರಿ ಚಾಲ್ತಿಗೊಳ್ಳದ ಬರೋಬ್ಬರಿ 10 ಸಾವಿರ ಕೋಟಿ ರೂ. ಮೌಲ್ಯದ 14 ಯೋಜನೆ ಗಳನ್ನು ಕೈಬಿಡಲು ರೈಲ್ವೆ ಸಚಿವಾಲಯ ಚಿಂತನೆ ನಡೆಸಿದೆ.
ರೈಲ್ವೆ ಇಲಾಖೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹಲವಾರು ವರ್ಷಗಳ ಹಿಂದೆ ಘೋಷಣೆಯಾಗಿದ್ದರೂ ಕಾಮಗಾರಿ ಆರಂಭವಾಗದ ಬರೋಬ್ಬರಿ 160 ಯೋಜನೆಗಳನ್ನು ಕೈ ಬಿಡಲು ಸಚಿವಾಲಯ ಮುಂದಾಗಿದೆ. ಈ ಮೂಲಕ ಯೋಜನೆಗಳಿಗೆ ಪ್ರತಿ ವರ್ಷ ಬಜೆಟ್ನಲ್ಲಿ ಮೀಸಲಿಡಬೇಕಿದ್ದ ಹಣವನ್ನು ಉಳಿತಾಯ ಮಾಡುವ ಆಲೋಚನೆಯ ಲ್ಲಿದೆ. ಈ 160 ಯೋಜನೆಗಳ ಪೈಕಿ ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳಕ್ಕೆ ಸೇರಿದ 47 ಯೋಜನೆಗಳಿವೆ. ಈ ಎಲ್ಲ ಯೋಜ ನೆಗಳ ಮೊತ್ತ 41 ಸಾವಿರ ಕೋಟಿ ರೂ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ತಲಾ 14, ಕೇರಳ 5 ಯೋಜನೆ ಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಈ ಪೈಕಿ ಅತಿ ಹೆಚ್ಚು ಮೊತ್ತದ ಅಂದರೆ 19,500 ಕೋಟಿ ರೂ. ಮೌಲ್ಯದ ಯೋಜನೆ ತಮಿಳುನಾಡಿನದ್ದಾಗಿದ್ದರೆ, ನಂತರದ ಸ್ಥಾನ ದಲ್ಲಿ 10 ಸಾವಿರ ಕೋಟಿ ರೂ. ಮೊತ್ತದ ಕರ್ನಾಟಕದ ಯೋಜನೆಗಳಿವೆ. ಆಂಧ್ರ ಪ್ರದೇಶ 9000 ಕೋಟಿ, ಕೇರಳ 2300 ಕೋಟಿ ಮೌಲ್ಯದ ಯೋಜನೆಗಳನ್ನು ಕಳೆದು ಕೊಳ್ಳುವ ಆತಂಕ ಎದುರಿಸುತ್ತಿವೆ ಎಂದು ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ.
ರೈಲ್ವೆ ಸಚಿವಾಲಯ ಕೈಬಿಡಲು ಉದ್ದೇಶಿಸಿರುವ ಯೋಜನೆಗಳಲ್ಲಿ ಬಹುತೇಕವು ಮಂಜೂ ರಾಗಿದ್ದು ಲಾಲು ಪ್ರಸಾದ್ ಯಾದವ್ ಹಾಗೂ ಮಮತಾ ಬ್ಯಾನರ್ಜಿ ಅವರು ರೈಲ್ವೆ ಸಚಿವರಾಗಿದ್ದ 2004-2012ರ ಅವಧಿಯಲ್ಲಿ.ಅದುಬಿಟ್ಟರೆ 1992-1993ರ ಅವಧಿಯಲ್ಲಿ ಮಂಜೂರಾದ ಯೋಜನೆಗಳೂ ಸೇರಿವೆ. ಆದರೆ ಆ ಯೋಜನೆಗಳು ಯಾವುವು ಎಂಬ ವಿವರ ಲಭಿಸಿಲ್ಲ.
ತೀರಾ ಹಳೆಯ ಯೋಜನೆಗಳಲ್ಲಿ ಪ್ರಗತಿ ಶೂನ್ಯವಾಗಿದೆ. ಅದರಿಂದ ಯಾವ ಲಾಭವೂ ಬರುತ್ತಿಲ್ಲ ಎಂಬ ವಾದ ರೈಲ್ವೆ ಇಲಾಖೆಯದ್ದಾಗಿದೆ. ಉದಾಹರಣೆಗೆ 13,951.7 ಕೋಟಿ ರೂ. ಮೊತ್ತದ ಬೆಂಗಳೂರು- ಸತ್ಯಮಂಗಲ ರೈಲು ಮಾರ್ಗ ಯೋಜನೆ 1996-97ನೇ ಸಾಲಿನಲ್ಲೇ ಮಂಜೂರಾಗಿದ್ದರೂ ಈವರೆಗೂ ಆರಂಭವಾಗಿಲ್ಲ. ಇದಲ್ಲದೆ 1992- 2000ನೇ ಇಸ್ವಿಯ ನಡುವೆ ಆರಂಭವಾದ ಏಳು ಯೋಜನೆಗಳು ಇನ್ನೂ ಮೇಲೆದ್ದಿಲ್ಲ. 225 ಕೋಟಿ ರೂ. ಮೊತ್ತದ ವೈಟ್ಫೀಲ್ಡ್- ಬಂಗಾರಪೇಟೆ- ಕುಪ್ಪಂ ರೈಲು ಮಾರ್ಗ 1992-93ನೇ ಸಾಲಿನಲ್ಲಿ ಮಂಜೂರಾಗಿದ್ದರೂ ಶುರುವಾಗಿಲ್ಲ.
ಹಲವಾರು ಯೋಜನೆಗಳು ಈವರೆಗೂ ಪೂರ್ಣಗೊಳ್ಳದೇ ಇರಲು ಬಹುಮುಖ್ಯ ಕಾರಣವೆಂದರೆ, ಭೂಸ್ವಾಧೀನ ಹಾಗೂ ಅರಣ್ಯ ಇಲಾಖೆ ಅನುಮತಿ ದೊರೆಯುವಲ್ಲಿ ಆಗುತ್ತಿರುವ ವಿಳಂಬ. ಬೆಂಗಳೂರು- ಸತ್ಯಮಂಗಲ ಯೋಜನೆಗಾಗಿ ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ ನಡೆಸಬೇಕಾಗಿದೆ.
ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೆ ಬಂದ ಬಳಿಕ ಒಂದೇ ಒಂದು ಇಂಚು ಜಾಗವೂ ರೈಲ್ವೆ ಇಲಾಖೆಗೆ ಸಿಕ್ಕಿಲ್ಲ. ತುಮಕೂರು- ರಾಯದುರ್ಗ, ತುಮಕೂರು- ಚಿತ್ರದುರ್ಗ- ದಾವಣಗೆರೆ, ಹರಿಹರ- ಶಿವಮೊಗ್ಗ ಯೋಜನೆಗಳು ಭೂಸ್ವಾಧೀನ ಸಮಸ್ಯೆಯಿಂದಲೇ ತೊಂದರೆಗೆ ಸಿಲುಕಿವೆ ಎಂದು ವಿವರಿಸಿವೆ.
ಹಿಂದೆ ಮಂಜೂರಾಗಿದ್ದ ಯೋಜನೆಗಳನ್ನು ರದ್ದುಗೊಳಿಸುವ ರೈಲ್ವೆ ಇಲಾಖೆ ಚಿಂತನೆಗೆ ತಮಿಳುನಾಡಿನ ರಾಜಕೀಯ ಪಕ್ಷ ಪಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಯೋಜನೆಗಳನ್ನೆಲ್ಲಾ ರೈಲ್ವೆ ಇಲಾಖೆಯೇ ಆರಂಭಿಸಿತ್ತು. ಯೋಜನೆಗಳು ಆರಂಭವಾಗಿಲ್ಲ ಎಂಬ ಕಾರಣ ನೀಡಿ ಈಗ ರದ್ದುಗೊಳಿಸಲಾಗುತ್ತಿದೆ. ಯೋಜನೆಗಳನ್ನು ಅನುಷ್ಠಾನಗೊಳಿಸುವುದು ರೈಲ್ವೆ ಸಚಿವಾಲಯದ ಕೆಲಸ. ಅದು ಆರಂಭವಾಗದಿರುವ ಹಿನ್ನೆಲೆಯಲ್ಲಿ ಯಾರ ವಿರುದ್ಧವಾದರೂ ಕ್ರಮ ಕೈಗೊಳ್ಳಬೇಕಾದಲ್ಲಿ ಅದು ರೈಲ್ವೆ ಸಚಿವಾಲಯ ಅಧಿಕಾರಿಗಳ ವಿರುದ್ಧವೇ ಹೊರತು ಜನತೆಯ ಮೇಲಲ್ಲ ಎಂದು ಪಕ್ಷದ ಸಂಸ್ಥಾಪಕ ಡಾ.ಎಸ್. ರಾಮದಾಸ್ ಕಿಡಿಕಾರಿದ್ದಾರೆ.
ಯಾವ ಯೋಜನೆಗಳನ್ನೂ ರದ್ದುಪಡಿಸಿಲ್ಲ. ಯೋಜನೆಗಳನ್ನು ರದ್ದುಪಡಿಸುವ ಅಧಿಕಾರ ರೈಲ್ವೆ ಮಂಡಳಿಗೆ ಇಲ್ಲ. ಯಾವುದೇ ಒಂದು ರೈಲ್ವೆ ಯೋಜನೆ ಘೋಷಣೆಯಾಗಿ 'ಪಿನ್ಬುಕ್'ನಲ್ಲಿ ದಾಖಲಿಸಲ್ಪಟ್ಟರೆ ಅದನ್ನು ರದ್ದುಪಡಿಸಲು ಆಗುವುದಿಲ್ಲ. ಒಂದು ವೇಳೆ ಯೋಜನೆ ರದ್ದುಪಡಿಸಬೇಕೆಂದರೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಬೇಕು ಎಂದು ನೈಋತ್ಯ ರೇಲ್ವೆ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಿ.ಎಸ್.ಗುಪ್ತಾ ತಿಳಿಸಿದ್ದಾರೆ
ಪೂರ್ಣಗೊಳ್ಳದ ಪ್ರಮುಖ ರೈಲು ಯೋಜನೆಗಳು
1. ಬೆಂಗಳೂರು- ಸತ್ಯಮಂಗಲ
2. ವೈಟ್ಫೀಲ್ಡ್- ಬಂಗಾರಪೇಟೆ- ಕುಪ್ಪಂ
3. ತುಮಕೂರು- ರಾಯದುರ್ಗ
4. ತುಮಕೂರು- ಚಿತ್ರದುರ್ಗ- ದಾವಣಗೆರೆ
5. ಹರಿಹರ- ಶಿವಮೊಗ್ಗ