ನವದೆಹಲಿ : ಭಾರತ ಎಂದಿಗೂ ಆಕ್ರಮಣಕಾರಿ ನಿಲುವು ತಳೆಯಲು ಬಯಸುವುದಿಲ್ಲ ಆದರೆ ಯಾವುದೇ ರಾಷ್ಟ್ರಗಳು ನಮ್ಮ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಬಾರದು ಅಂತಹ ಭಾರತವನ್ನು ನಿರ್ಮಿಸುವುದಾಗಿ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ಹೇಳಿದ್ದಾರೆ.
ನವದೆಹಲಿಯ ವಾಯುಪಡೆ ಕೇಂದ್ರದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಭಾರತ ಎಂದಿಗೂ ಇತರ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಬಯಸಿಲ್ಲ. ರಾಮಾಯಣ ಕಾಲದ ಉಲ್ಲೇಖಗಳನ್ನು ನೋಡಿದರೂ ರಾವಣನನ್ನು ಸಂಹರಿಸಿದ ರಾಮ ಲಂಕೆಯನ್ನು ಆಳುವ ಅವಕಾಶವಿದ್ದರೂ ಹಾಗೆ ಮಾಡಲಿಲ್ಲ. ನಮ್ಮ ದೇಶದ ಇತಿಹಾಸದಲ್ಲಿ ಭಾರತ ಅನ್ಯ ದೇಶಗಳನ್ನು ಆಳಿರುವ ಉಲ್ಲೇಖವಿಲ್ಲ. ಭಾರತ ಎಂದಿಗೂ ಆಕ್ರಮಣಕಾರಿ ನಿಲುವು ತಳೆಯಲು ಬಯಸುವುದಿಲ್ಲ ಹಾಗೆಯೇ ಭಾರತ ಎಂದಿಗೂ ದುರ್ಬಲವಾಗಿರಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.
ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಸದೃಢವಾಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಮನೋಹರ್ ಪರೀಕ್ಕರ್ ಭರವಸೆ ನೀಡಿದ್ದಾರೆ. ರಕ್ಷಣಾ ಇಲಾಖೆಯಲ್ಲಿ ಮಾಹಿತಿಗಳನ್ನು ಗೌಪ್ಯವಾಗಿರಿಸುವುದು ಅತಿ ಮುಖ್ಯವಾಗಿದೆ. ಇದೇ ವೇಳೆ ಎಲ್ಲಾ ರಕ್ಷಣಾ ಸಾಮಗ್ರಿಗಳಿಗಾಗಿ ವಿದೇಶದ ನೆರವು ಪಡೆಯುವುದು ಅಸಾಧ್ಯ ಭಾರತ ರಕ್ಷಣಾ ಸಾಮಗ್ರಿಗಳ ಖರೀದಿ ವಿಷಯದಲ್ಲಿ ಸ್ವಾವಲಂಬಿಯಾಗಬೇಕೆಂದು ಪರೀಕ್ಕರ್ ಅಭಿಪ್ರಾಯಪಟ್ಟಿದ್ದಾರೆ. ರಕ್ಷಣಾ ಇಲಾಖೆಯಲ್ಲಿ ಕಂಡುಬರುವ ದೋಷಗಳನ್ನು ಸಹಿಸಬಾರದು ಎಂದೂ ಪರೀಕ್ಕರ್ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.