Mangalore : ಪರಿಸರದಲ್ಲಿ ಪ್ರತಿಯೊಂದು ಗಿಡವೂ ಮುಖ್ಯವಾದುದು. ಪರಿಸರದ ಮಧ್ಯದಲ್ಲಿ ಸಿಗುವ ಸುಖ ಎಲ್ಲಿಯೂ ಸಿಗಲಾರದು. ಗಿಡಮರಗಳನ್ನು ಬೆಳೆಸುವಲ್ಲಿ ಸಿಗುವ ಸ್ವಾತಂತ್ರ್ಯ ಬೇರೆ ಯಾವ ಉದ್ಯೋಗದಲ್ಲೂ ಸಿಗಲಾರದು. ಹಾಗಾಗಿ ನಾವೆಲ್ಲ ಗಿಡಗಳನ್ನು ಪ್ರೀತಿಸಿ, ಬೆಳೆಸಿ, ಪೋಷಿಸಬೇಕೆಂದು ಶ್ರೀನಿವಾಸ ರಾವ್ ಪೈಲೂರು ತಿಳಿಸಿದ್ದಾರೆ.
ಸ್ನೇಹ ಶಿಕ್ಷಣ ಸಂಸ್ಥೆಯ ಇಕೋಕ್ಲಬ್ ನ ವತಿಯಿಂದ ನಡೆದ ಸ್ನೇಹ ಶಾಲಾ ಪರಿಸರದ ಸಸ್ಯರಾಶಿಗಳು ಎಂಬ ನಾಮಫಲಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಈ ಫಲಕದಲ್ಲಿ ಶಾಲಾ ಆವರಣದಲ್ಲಿ ಬೆಳೆಸಿರುವ 93 ಮರಗಳು, 87 ಗಿಡಗಳು, 61 ಹೂವು ಗಿಡಗಳು, 51 ಪೊದರು ಹುಲ್ಲು ಜಾತಿಯ ಸಸ್ಯಗಳು ಹಾಗೂ 7 ಬಗೆಯ ಗೆಡ್ಡೆ ಗೆಣಸುಗಳ ಹೆಸರುಗಳಿವೆ.
ಸಮಾರಂಭದ ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಉಪಸ್ಥಿತರಿದ್ದರು. ಶಾಲಾ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕ ಪ್ರಸನ್ನ ಐವರ್ನಾಡು ಸ್ವಾಗತಿಸಿ, ವಂದಿಸಿದರು.