ಲಖ್ನೌ : ಅಪರಾಧ ಪ್ರಕರಣಗಳು, ಬಡತನ, ಆರ್ಥಿಕ ಹಿಂದುಳಿಯುವಿಕೆಗೆ ಅಪಖ್ಯಾತಿ ಪಡೆದಿರುವ ಉತ್ತರಪ್ರದೇಶದಲ್ಲಿ, ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್ ತಮ್ಮ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನೂರಾರು ಕೋಟಿ ರೂ. ಸರ್ಕಾರಿ ವೆಚ್ಚದಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಕೊಳ್ಳುತ್ತಿರುವುದು ಮುಲಾಯಂ ಸಿಂಗ್ ಅವರು ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.
ಮುಲಾಯಂ ಆಪ್ತ, ರಾಜ್ಯದ ಹಿರಿಯ ಮಂತ್ರಿ ಆಜಂ ಖಾನ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಶುಕ್ರವಾರದಿಂದ ಆಜಂ ತವರೂರಾದ ರಾಂಪುರದಲ್ಲಿ ಆರಂಭವಾಗಿದೆ. ಹುಟ್ಟುಹಬ್ಬದ ದಿನವಾದ ಶನಿವಾರವೂ ಆಚರಣೆ ಮುಂದುವರಿಯಲಿದೆ. ವಿಚಿತ್ರ ವೆಂದರೆ ಉತ್ತರ ಪ್ರದೇಶ ಸರ್ಕಾರಕ್ಕೆ ಯಾವುದೇ ರೀತಿಯ ಸಂಬಂಧವಿರದ ಈ ನೇತಾರನ ಹುಟ್ಟುಹಬ್ಬಕ್ಕೆ ಇಡೀ ಜಿಲ್ಲಾಡಳಿತ ಮತ್ತು ಸರ್ಕಾರದ ವಿವಿಧ ಇಲಾಖೆಗಳು ಟೊಂಕಕಟ್ಟಿ ನಿಂತಿವೆ.
ಇಡೀ ಊರನ್ನೇ ತೋರಣ, ಬ್ಯಾನರ್ಗಳಿಂದ ಸಿಂಗರಿಸಲಾಗಿದೆ. ನಗರದಾದ್ಯಂತ 100 ಸ್ವಾಗತ ದ್ವಾರ ಹಾಕಲಾಗಿದೆ. ರಸ್ತೆ ವಿಭಜಕಗಳಿಗೆ ಬಣ್ಣ ಬಳಿಯಲಾಗಿದ್ದು, ಹಾಳಾದ ರಸ್ತೆಗಳಿಗೆಲ್ಲ ಡಾಂಬರ್ ಮೆತ್ತಲಾಗಿದೆ. 75 ತುಂಬಿದ ನಿಮಿತ್ತ ಮುಲಾಯಂ ಅವರು ಶುಕ್ರವಾರ ಮಧ್ಯರಾತ್ರಿ 12 ಗಂಟೆಗೆ 75 ಅಡಿ ಉದ್ದದ ಬೃಹತ್ ಕೇಕ್ ಕತ್ತರಿಸಿ ಹುಟ್ಟುಹಬ್ಟಾಚರಣೆಯನ್ನು ಮುಲಾಯಂ ಯಶಸ್ವಿಯಾಗಿ ಮಾಡಿಕೊಂಡಿದ್ದಾರೆ.
ಇದಕ್ಕೂ ಮುನ್ನ ಸಂಜೆ ರಾಂಪುರಕ್ಕೆ ಮುಲಾಯಂ ಅವರು ವಿದೇಶದಿಂದ ಆಮದಾದ ವಿಕ್ಟೋರಿಯನ್ ಬಗ್ಗಿ ಐಷಾರಾಮಿ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಆಗಮಿಸಿದರು. ಕಳೆದ ಸಲ ಮುಲಾಯಂ ವಿಂಟೇಜ್ ಕಾರಿನಲ್ಲಿ ಬಂದಿದ್ದರು. ಈ ಸಲ ವಿಕ್ಟೋರಿಯನ್ ಬಗ್ಗಿಯಲ್ಲಿ ಆಗಮಿಸಿದ್ದಾರೆ.
ಇದೇ ವೇಳೆ, ಸಂಸ್ಕೃತಿ ಇಲಾಖೆ ವೆಚ್ಚದಲ್ಲಿ ಹನ್ಸರಾಜ್ ಹನ್ಸ್ ಮತ್ತು ಶಬರಿ ಸೋದರರಿಂದ ಸಂಗೀತ ಸಂಎಯನ್ನೂ ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ಅಖೀಲೇಶ್ ಯಾದವ್ ಸೇರಿದಂತೆ ಗಣ್ಯರು, ಅಧಿಕಾರಿಗಳ ದಂಡೇ ರಾಂಪುರದಲ್ಲಿ ನೆರೆದಿತ್ತು. ಗಣ್ಯರನ್ನು ಕರೆತರಲೆಂದೇ 4 ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ.
ಮುಲಾಯಂ ಹುಟ್ಟುಹಬ್ಬಕ್ಕೆ ನಮ್ಮ ತಕರಾರಿಲ್ಲ. ಆದರೆ ಸರಳತೆ ಹಿನ್ನೆಲೆಯ ಸಮಾಜವಾದಿ ನೆಲೆಯಿಂದ ಬಂದ ಈ ನಾಯಕನ ಹುಟ್ಟುಹಬ್ಬ ಸರ್ಕಾರಿ ದುಂದುವೆಚ್ಚದಲ್ಲೇಕೆ? ಜನರ ಕಷ್ಟ ಆಲಿಸುವುದು ಬಿಟ್ಟು ಜಿಲ್ಲಾಡಳಿತ ಈ ಸಮಾರಂಭದ ತಯಾರಿಯಲ್ಲಿ ಪಾಲ್ಗೊಂಡಿದ್ದು ಸರಿಯೆ ಎಂದು ಬಿಜೆಪಿ ಪ್ರಶ್ನಿಸಿದೆ.
ಮುಲಾಯಂ ಸಿಂಗ್ ಯಾದವ್ ಜನ್ಮದಿನಕ್ಕೆ ಹಣ ಬಂದಿದ್ದು ಎಲ್ಲಿಂದ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಪ್ರದೇಶ ಸಚಿವ ಆಜಂ ಖಾನ್ ಉಡಾಫೆ ಉತ್ತರ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಕೆಲ ಹಣ ತಾಲಿಬಾನ್ನಿಂದ, ಕೆಲ ದುಡ್ಡು ದಾವೂದ್ ಇಬ್ರಾಹಿಂನಿಂದ ಮತ್ತು ಕೆಲ ಕಾಸು ಅಬು ಸಲೇಂನಿಂದ ಮತ್ತು ಕೆಲವು ಉಗ್ರಗಾಮಿಗಳಿಂದ ಎಂದು ಖಾನ್ ಲಘು ಧಾಟಿಯಲ್ಲಿ ಹೇಳಿದ್ದಾರೆ. ಆಜಂರ ಈ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಸದಾ ವಿವಾದಿತ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಆಜಂ, ಕಳೆದ ಎರಡು ದಿನಗಳ ಹಿಂದಷ್ಟೇ ರಾಷ್ಟ್ರೀಯ ಸ್ಮಾರಕವಾದ ತಾಜ್ಮಹಲನ್ನು ವಕ್ಫ್ ಮಂಡಳಿಗೆ ಸೇರಿಸಿ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು.