ನವದೆಹಲಿ : ನಿಗಮ ಮಂಡಳಿಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ಸಿಂಗ್ ಸ್ಪಷ್ಟ ಸೂಚನೆ ನೀಡಿದ್ದಾರೆ.
ಶಾಸಕರಾಗಿ ಆಯ್ಕೆಯಾಗಿರುವವರು ಈಗಾಗಲೇ ಒಂದು ಅಧಿಕಾರದಲ್ಲಿದ್ದಾರೆ. ಅವರಿಗೆ ಮತ್ತೊಂದು ಅಧಿಕಾರ ನೀಡುವ ಬದಲು ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕು ಎಂದು ನಿಗಮ ಮಂಡಳಿ ಅಧ್ಯಕ್ಷ-ಸದಸ್ಯರ ನೇಮಕಾತಿ ಸಂಬಂಧ ಹೈಕಮಾಂಡ್ ಅನುಮತಿ ಪಡೆಯಲು ನವದೆಹಲಿಗೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ನಿಗಮ ಮಂಡಳಿಗಳಲ್ಲಿ ಶಾಸಕರಿಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಈಗಾಗಲೇ ಬೆಂಗಳೂರಿಗೆ ಎರಡು ಮೂರು ಬಾರಿ ನಿಗಮ ಮಂಡಳಿ ನೇಮಕಾತಿ ವಿಷಯ ಸಂಬಂಧ ಚರ್ಚಿಸಲೆಂದು ಆಗಮಿಸಿದ್ದ ಸಂದರ್ಭದಲ್ಲೂ ಕೂಡ ಹಾಲಿ ಶಾಸಕರಿಗೆ ಮತ್ತು ಪರಾಜಿತ ಅಭ್ಯರ್ಥಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ದಿಗ್ವಿಜಯ್ಸಿಂಗ್ ಹೇಳಿದ್ದರು.
ಪಟ್ಟಿ ಅಂತಿಮಗೊಳಿಸುವ ಸಂದರ್ಭದಲ್ಲೂ ಕೂಡ ಇದನ್ನೇ ಪ್ರತಿಪಾದಿಸಿರುವ ಹಿನ್ನೆಲೆಯಲ್ಲಿ ಹಾಲಿ ಶಾಸಕರು ಅವಕಾಶ ವಂಚಿತರಾಗಲಿದ್ದಾರೆ. ಹಾಲಿ ಶಾಸಕರಿಗೂ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದರು. ದಿಗ್ವಿಜಯ್ ಸಿಂಗ್ ಅವರ ಈ ತೀರ್ಮಾನದಿಂದ ಸಿಎಂ ಪ್ರಯತ್ನಕ್ಕೆ ತಣ್ಣೀರೆರಚಿದಂತಾಗಿದೆ.