ನವದೆಹಲಿ : ಬಿಜೆಪಿ ಆದ್ಯತೆ ದೇಶದ ಭದ್ರತೆ ಹೊರತು ಜಮ್ಮು-ಕಾಶ್ಮೀರ ಸರ್ಕಾರದ ಜೊತೆಗಿನ ಮೈತ್ರಿಕೂಟಕ್ಕೆ ಅಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕತಾವಾದಿ ಮಸರತ್ ಆಲಂ ಬಿಡುಗಡೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಕುರಿತಂತೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.
ಮಸರತ್ ಆಲಂನನ್ನು ಜೈಲಿನಿಂದ ಬಿಡುಗಡೆಗೊಳಸಿರುವ ಬಗ್ಗೆ ಜಮ್ಮು-ಕಾಶ್ಮೀರ ಸರ್ಕಾರ ನೀಡಿರುವ ವರದಿ ತಮಗೆ ಸಮಾಧಾನ ತಂದಿಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ದೇಶದ ಭದ್ರತೆ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದ ಅವರು. ಯಾವುದೇ ಸರ್ಕಾರವಿರಲಿ, ಮೈತ್ರಿಕೂಟ ಅಥವಾ ಮೈತ್ರಿಕೂಟ ಇಲ್ಲದಿರಲಿ. ಅದು ನಮ್ಮ ಆದ್ಯತೆ ಅಲ್ಲ. ನಮ್ಮ ಆದ್ಯತೆ ದೇಶ ಮತ್ತು ಭದ್ರತೆ ಎಂದು ಹೇಳಿದರು. ಲೋಕಸಭೆಯಲ್ಲಿಯೂ ಇದೇ ವಿಷಯವನ್ನು ಸ್ಪಷ್ಟಪಡಿಸಿದ್ದೇನೆ ಎಂದರು.