ಬೆಂಗಳೂರು : ಮಾನವನ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಎಲ್ಲ ರೀತಿಯ ತಂಬಾಕು ಉತ್ಪನ್ನಗಳನ್ನು ನಿಷೇಧ ಮಾಡುವುದು ಸೂಕ್ತ ಎಂದು ರಾಜ್ಯಪಾಲ ವಾಜುಭಾಯ್ ರೂಢಭಾಯ್ ವಾಲಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಗೆರಿಯಾಟ್ರಿಕ್ಸ್ ಮತ್ತು ಗೆರಾಂಟಾಲಜಿ ಕುರಿತು ಮೂರನೇ ವಿಶ್ವ ಕಾಂಗ್ರೆಸ್ ಹಾಗೂ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸಾಮಾಜಿಕ, ಆರ್ಥಿಕ ಸಮಾನತೆ ಕುರಿತು ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಶೇ.90ರಷ್ಟು ಕಾಯಿಲೆಗಳು ತಂಬಾಕು ಸೇವನೆಯಿಂದಲೇ ಬರುತ್ತವೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಅದರಲ್ಲೂ ಕ್ಯಾನ್ಸರ್ ಗೆ ತಂಬಾಕು ಸೇವನೆಯೇ ಕಾರಣ ಎಂದು ವೈದ್ಯಕೀಯ ವರದಿಗಳು ಸಾಬೀತುಪಡಿಸಿವೆ. ಈ ನಿಟ್ಟಿನಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧ ಮಾಡಲು ಹೊರಟಿರುವ ಸರ್ಕಾರದ ಕ್ರಮ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಗುಜರಾತ್ನಲ್ಲಿ ಈಗಾಗಲೇ ಅಲ್ಲಿನ ಸರ್ಕಾರ ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳನ್ನು ನಿಷೇಧ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ತೆಗೆದುಕೊಂಡು ನಿಷೇಧ ಮಾಡಲಿ ಎಂದು ಸಲಹೆ ನೀಡಿದರು.
ಹಿಂದೆ ಮನುಷ್ಯ ಆಹಾರವಿಲ್ಲದೆ ಸಾಯುತ್ತಿದ್ದ. ಇಂದು ಅತಿಯಾಗಿ ತಿನ್ನುವುದರಿಂದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಳಗ್ಗೆ ಟೀ, ತಿಂಡಿ, ಮಧ್ಯಾಹ್ನ ಊಟ, ಸಂಜೆ ತಿಂಡಿ, ರಾತ್ರಿ ಊಟ ತಿಂದರೆ ದೇಹ ದಂಡನೆಗೆ ಅವಕಾಶವೆಲ್ಲಿದೆ ಎಂದು ಪ್ರಶ್ನಿಸಿದರು. ಒಬ್ಬ ಕುರಿ ಕಾಯುವವನು ದಿನಕ್ಕೆ 10 ರಿಂದ 15 ಕಿ.ಮೀ. ನಡೆಯುತ್ತಾನೆ. ಆತ ರೊಟ್ಟಿ , ಕುರಿ ಹಾಲು ಸೇವಿಸುವುದರಿಂದ ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಸೇರಿದಂತೆ ಯಾವ ಕಾಯಿಲೆಯೂ ಬರುವುದಿಲ್ಲ. ದೇಹಕ್ಕೆ ಪರಿಶ್ರಮ ನೀಡಿದರೆ ಎಲ್ಲ ಕಾಯಿಲೆಯಿಂದ ಮುಕ್ತರಾಗಬಹುದು ಎಂದರು.
ನಾವು ಇಂದು ಒಂದೊಂದು ವಿಟಮಿನ್ಗೂ ಮಾತ್ರೆ ಸೇವಿಸುತ್ತೇವೆ. ಹಳ್ಳಿಗಳಲ್ಲಿರುವ ರೈತರು ಕಠಿಣ ಪರಿಶ್ರಮದ ಮೂಲಕ ಸ್ವಾಭಾವಿಕವಾಗಿ ಅವನ್ನು ಪಡೆದು ಹೆಚ್ಚು ಕಾಲ ಬದುಕುತ್ತಾರೆ. ಇಂದಿನ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕಾದರೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು. ಹೆಣ್ಣು ಮಕ್ಕಳ ರಕ್ಷಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಎಂಬ ನೀತಿ ಅಳವಡಿಸಿಕೊಂಡರೆ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.