ಸಿಡ್ನಿ : ನಿಮ್ಮ ಕನಸು ನನ್ನ ಕನಸಿನ ಭಾರತವೂ ಆಗಿದೆ. ನೀವು ನೋಡಬಯಸುತ್ತಿರುವ ಭಾರತವನ್ನೇ ನಾನೂ ನೋಡಬಯಸುತ್ತೇನೆ, ದೇವರು ನೀಡಿರುವ ಬುದ್ಧಿ, ಶಕ್ತಿ, ಸಮಯವನ್ನು ನಿಮ್ಮ ಕನಸಿನ ಭಾರತ ನಿರ್ಮಾಣಕ್ಕಾಗಿ ವಿನಿಯೋಗಿಸುತ್ತೇನೆ ಎಂದು ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಅಲ್ಫೋನ್ಸ್ ಅರೆನಾ ಕ್ರೀಡಾಂಗಣದಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಶ್ವಕ್ಕೆ ಅಗತ್ಯವಿರುವ ಕಾರ್ಯಪಡೆಯನ್ನು ಪೂರೈಕೆ ಮಾಡುವ ಸಾಮಾರ್ಥ್ಯ ಭಾರತಕ್ಕಿದೆ. ಭಾರತದ ಯುವಜನತೆಗೆ ಕಲ್ಲನ್ನು ಪುಡಿ ಮಾಡುವ ತಾಕತ್ತಿದೆ. ಮತ್ತೆ ಭಾರತ ಮಾತೆ ವಿಶ್ವ ಗುರುವಾಗಿ ಹೊರಹೊಮ್ಮುತ್ತಾಳೆ, ಭಾರತ ಮಾತೆ ಎಲ್ಲರನ್ನೂ ಮುನ್ನಡೆಸಬೇಕು ಎಂಬ ಸ್ವಾಮಿ ವಿವೇಕಾನಂದರ ಕನಸು ಸುಳ್ಳಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಯುವ ಭಾರತದ ಕನಸು ಕಂಡಿದ್ದರು. ಆ ಕನಸು ನನಸಾಗುತ್ತಿದೆ. ಭಾರತದ ಯುವಜನತೆಗೆ ಕಲ್ಲನ್ನು ಪುಡಿಗಟ್ಟೋ ತಾಕತ್ತಿದೆ ಎಂದು ತಿಳಿಸಿದ್ದಾರೆ. ಭಾರತ ಶಿಕ್ಷಕರನ್ನು ರಫ್ತು ಮಾಡಬೇಕು 2020ರ ವೇಳೆಗೆ ಇಡೀ ವಿಶ್ವಕ್ಕೆ ಮಾನವ ಸಂಪನ್ಮೂಲ ಕೊರತೆ ಎದುರಾಗಲಿದೆ. ಆಗ ಜಗತ್ತು ಭಾರತದ ಕಡೆಗೆ ತಿರುಗಿ ನೋಡಬೇಕಿದೆ. ಭಾರತ ಬರೀ ಇಂಜಿನಿಯರುಗಳನ್ನು ರಫ್ತು ಮಾಡುವುದಿಲ್ಲ, ಶಿಕ್ಷಕರು, ನರ್ಸ್ ಗಳು, ವಿಜ್ಞಾನಿಗಳನ್ನು ಇಡೀ ವಿಶ್ವಕ್ಕೆ ಕಳಿಸಲು ಸಮರ್ಥವಾಗಿರುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಸ್ವಾಮಿ ವಿವೇಕಾನಂದರು ಹೇಳಿದ್ದರು ದೇವ ದೇವತೆಗಳನ್ನು ಜನ ಮರೆತು ಬಿಡುತ್ತಾರೆ, ಅದು ಇಂದು ನಿಜವಾಗಿದೆ. ಕೇವಲ ಭಾರತ ಮಾತೆಯನ್ನು ಪೂಜಿಸಿ. ಭಾರತವನ್ನು ಉತ್ತುಂಗಕ್ಕೆ ಏರಿಸಿ ಎಂದು ಮೋದಿ ಕರೆ ನೀಡಿದ್ದಾರೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಮಡಿಯುವ ಅವಕಾಶ ನಮಗೆ ಸಿಗಲಿಲ್ಲ, ಆದರೆ ದೇಶಕ್ಕಾಗಿ ಬದುಕುವ ಅವಕಾಶ ದೊರೆತಿದೆ. ನಾವು ದೇಶಕ್ಕಾಗಿ ಬದುಕಬೇಕು ಎಂದು ಮೋದಿ ಕರೆ ನೀಡಿದ್ದಾರೆ. ನನ್ನ 6 ತಿಂಗಳ ಆಡಳಿತ ಅನುಭವ ಏನೂ ಅಲ್ಲ. ಸ್ವಾತಂತ್ರ್ಯ ಬಳಿಕ ಇನ್ನು ಎಷ್ಟೋ ಮಂದಿಗೆ ಮೂಲಸೌಕರ್ಯ ಸೌಲಭ್ಯಗಳು ಸಿಕ್ಕಿಲ್ಲ. ನಾನು ಚಿಕ್ಕ ಚಿಕ್ಕ ಕೆಲಸ ಮೊದಲು ಮಾಡಬೇಕಿದೆ. ಸಾಮಾನ್ಯ ಜನರಿಗೂ ವ್ಯವಸ್ಥೆಯ ಬಗ್ಗೆ ಅರಿವೂ ಮೂಡಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.
ದೇಶದ ಬಡ ಜನತೆಯನ್ನು ಆರ್ಥಿಕತೆಯೊಂದಿಗೆ ಬೆಸೆಯಲು ಜನ್-ಧನ್ ಯೋಜನೆ ಜಾರಿಗೆ ತರಲಾಗಿದೆ. ಈ ವರೆಗೂ 7 ಕೋಟಿ ಜನರಿಗೆ ಬ್ಯಾಂಕ್ ಖಾತೆ ಒದಗಿಸಲಾಗಿದೆ. ಝೀರೋ ಬ್ಯಾಲೆನ್ಸ್ ನೊಂದಿಗೇ ಖಾತೆ ತೆರೆಯುವುದಕ್ಕೆ ಅವಕಾಶವಿದ್ದರೂ ಭಾರತದ ಜನತೆ ಹಣ ಜಮಾವಣೆ ಮಾಡಿ ಖಾತೆ ತೆರೆದಿದ್ದು 5 ಸಾವಿರ ಕೋಟಿ ರೂಪಾಯಿ ಜಮಾವಣೆಯಾಗಿದೆ ಎಂದು ಪ್ರಧಾನಿ ಮೋದಿ ದೇಶದ ಜನತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುರಾತನ ಕಾಲದಲ್ಲಿ ನಿರ್ಮಾಣಗೊಂಡಿರುವ ಕಾನೂನುಗಳು ದೇಶದ ಜನತೆಯ ಉಸಿರುಗಟ್ಟಿಸುತ್ತಿದೆ, ಈ ಹಿಂದಿನ ಸರ್ಕಾರಗಳು ಕಾನೂನು ಮಾಡುವುದರಲ್ಲಿಯೇ ಆಸಕ್ತಿ ಹೊಂದಿದ್ದವು. ಆದರೆ ಜನಸಾಮಾನ್ಯರ ಉಸಿರುಕಟ್ಟಿಸುತ್ತಿರುವ ಕಾನೂನುಗಳನ್ನು ತೆಗೆದುಹಾಕುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಭಾರತವನ್ನು ನಿರ್ಮಿಸುವುದು ಸರ್ಕಾರದ ಕೆಲಸ ಎಂಬ ಮನೋಭಾವನೆ ಇದೆ. ಇಂತಹ ಮನೋಭಾವನೆ ಹೋಗಲಾಡಿಸಬೇಕು, ದೇಶದ ಜನತೆಯೇ ದೇಶವನ್ನು ನಿರ್ಮಿಸುತ್ತಾರೆ ಎಂಬುದನ್ನು ಅರಿಯಬೇಕು ಎಂದು ಮೋದಿ ತಿಳಿಸಿದ್ದಾರೆ.
ದೇಶದ ಸ್ವಚ್ಛತೆಗಾಗಿ ಹಮ್ಮಿಕೊಂಡಿರುವ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, 2019ರಲ್ಲಿ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಸ್ವಚ್ಛ ಭಾರತವನ್ನು ಗಾಂಧಿಗೆ ಅರ್ಪಿಸೋಣ ಎಂದು ಕರೆ ನೀಡಿದ್ದಾರೆ.