ಮೆಲ್ಬೋರ್ನ್ : ರಾಜ್ಯದ ಸಾಫ್ಟ್ ವೇರ್ ಎಂಜಿನಿಯರ್ ಐಟಿ ಸಲಹೆಗಾರ್ತಿ ಪ್ರಭಾ ಅರುಣ್ ಕುಮಾರ್ ಎಂಬುವವರನ್ನು ಆಸ್ಟ್ರೇಲಿಯಾದ ಸಿಡ್ನಿ ಹೊರವಲಯದಲ್ಲಿರುವ ವೆಸ್ಟರ್ ಮೀಡ್ನಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಸಿಡ್ನಿ ಹೊರವಲಯದ ವೆಸ್ಟ್ ಮೀಡ್ ಎಂಬಲ್ಲಿರುವ ತನ್ನ ಮನೆಯ ಸಮೀಪ ಶನಿವಾರ ರಾತ್ರಿ ಮೊಬೈಲ್ ನಲ್ಲಿ ಮಾತನಾಡುತ್ತ ಪ್ರಭಾ ನಡೆದು ಹೋಗುತ್ತಿದ್ದಾಗ ದುಷ್ಕರ್ಮಿಯೊಬ್ಬ ಅವರನ್ನು ಹತ್ಯೆ ಮಾಡಿದ್ದಾನೆ.
ಪ್ರಭಾ ಅವರ ಪತಿ ಅರುಣ್ ಕುಮಾರ್ ಶೆಟ್ಟಿ ಅವರು ಮಗಳೊಂದಿಗೆ ಬೆಂಗಳೂರಿನ ಬಾಪೂಜಿನಗರದಲ್ಲಿ ನೆಲೆಸಿದ್ದಾರೆ. ನಾಲ್ಕು ವರ್ಷದಿಂದ ಪ್ರಭಾ ಉದ್ಯೋಗ ನಿಮಿತ್ತ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಅವರ ತವರು ಬಂಟ್ವಾಳ ತಾಲೂಕಿನ ಅಮೂrರು ಗ್ರಾಮ.
ಇರಿತಕ್ಕೊಳಗಾಗುವ ವೇಳೆ ಪ್ರಭಾ ತನ್ನ ಮನೆಯಿಂದ 300 ಮೀಟರ್ ದೂರದಲ್ಲಿರುವ ಪಾರ್ಕ್ ನಂತಹ ಪ್ರದೇಶದಲ್ಲಿ ವಾಕ್ ಮಾಡುತ್ತ ಪತಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಅದು ಆಸ್ಟ್ರೇಲಿಯಾ ಕಾಲಮಾನದಲ್ಲಿ ರಾತ್ರಿ ಸುಮಾರು 9.30ರ ಸಮಯ. ಆಗ ಅವರ ಬಳಿಗೆ ದಿಢೀರನೆ ವ್ಯಕ್ತಿಯೊಬ್ಬ ಆಗಮಿಸಿದ್ದಾನೆ. ಅವನನ್ನು ನೋಡಿ ಬೆಚ್ಚಿದ ಪ್ರಭಾ, "ನನ್ನ ಬಳಿ ದೊಡ್ಡ ವ್ಯಕ್ತಿಯೊಬ್ಬ ನಿಂತಿದ್ದಾನೆ. ನನ್ನಲ್ಲಿರುವ ವಸ್ತುಗಳನ್ನು ಕೊಡು ಎಂದು ಕೇಳುತ್ತಿದ್ದಾನೆ. ಬಹುಶಃ ಈಗ ನನಗೆ ಚಾಕುವಿನಿಂದ ಇರಿಯುತ್ತಾನೆ' ಎಂದು ಫೋನ್ನಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಅನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಭಾರನ್ನು ಪಕ್ಕದ ಮನೆಯ ಸ್ನೇಹಿತ ನೊಬ್ಬ ನೋಡಿದ್ದು, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸೂಕ್ತ ದಾಖಲೆಗಳನ್ನು ಸಲ್ಲಿಸಿದ ಬಳಿಕ ಮಂಗಳವಾರ ಅಥವಾ ಬುಧವಾರ ಅವರ ಶವವನ್ನು ಬೆಂಗಳೂರಿಗೆ ತರಲಾಗುವುದು ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಉದ್ದೇಶಪೂರ್ವಕವಾಗಿ ಈಕೆಯನ್ನು ಹತ್ಯೆ ಮಾಡಲಾಗಿದೆಯೇ ಅಥವಾ ಇದು ಡಕಾಯಿತಿಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಸಿಡ್ನಿ ಪೊಲೀಸರು ತಿಳಿಸಿದ್ದಾರೆ.