ನವದೆಹಲಿ : ಬಹಳ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಛೋಟಾ ರಾಜನ್ನನ್ನು ಇಂಡೋನೇಷ್ಯಾದಿಂದ ಸಿಬಿಐ ಅಧಿಕಾರಿಗಳು ಶುಕ್ರವಾರ ಮುಂಜಾನೆ ದೆಹಲಿಗೆ ಕರೆತಂದಿದ್ದಾರೆ.
ಸಿಬಿಐ, ದಿಲ್ಲಿ,ಮುಂಬಯಿ ಪೊಲೀಸರ ತಂಡ ವಿಶೇಷ ವಿಮಾನದ ಮೂಲಕ ರಾಜನ್ ನೊಂದಿಗೆ ಶುಕ್ರವಾರ ಮುಂಜಾನೆ 5.30 ರ ವೇಳಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ಭಾರತಕ್ಕೆ ಹಿಂದಿರುಗಲು ನನಗೆ ಸಂತೋಷವಾಗುತ್ತದೆ ಎಂದು ರಾಜನ್ ಬಾಲಿಯಲ್ಲಿ ಮಾಧ್ಯಮದವರೆಗೆ ಹೇಳಿದ್ದನು.
ರಾಜನ್ನನ್ನು ಭಾರೀ ಭದ್ರತೆಯ ನಡುವೆ ಕರೆದೊಯ್ಯಲಾಗಿದ್ದು, ಶುಕ್ರವಾರ ಕೋರ್ಟ್ಗೆ ಹಾಜರು ಪಡಿಸುವ ಸಾಧ್ಯತೆಗಳಿವೆ.
ಆಸ್ಟ್ರೇಲಿಯಾದಲ್ಲಿ ಅಡಗಿಕೊಂಡಿದ್ದ ರಾಜನ್ ನನ್ನು ಅಕ್ಟೋಬರ್ 25 ರಂದು ಬಾಲಿಯಲ್ಲಿ ಬಂಧಿಸಲಾಗಿತ್ತು.
ಬಾಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಜ್ವಾಲಾಮುಖೀವೊಂದು ಏಕಾಏಕಿ ಲಾವಾರಸ ಚಿಮ್ಮಿಸಲು ಆರಂಭಿಸಿದ್ದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು 2 ದಿನ ಮುಚ್ಚಲಾಗಿತ್ತು. ಇದರಿಂದ ರಾಜನ್ ಕರೆತರುವುದು ತಡವಾಯಿತು.
ಆದರೆ ಗುರುವಾರ ವಾತಾವರಣ ತಿಳಿಗೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಗುರುವಾರ ಪುನರಾರಂಭಿಸಿದೆ.
ಕೊಲೆ, ಸುಲಿಗೆ, ಮಾದಕ ವಸ್ತುಸಾಗಣೆ ಮತ್ತಿತರ ಹಲವು ಪ್ರಕರಣಗಳಲ್ಲಿ ಬೇಕಾಗಿರುವ 55 ವರ್ಷದ ರಾಜನ್ 27 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿದ್ದಾನೆ.