ನವದೆಹಲಿ : 'ರಕ್ಷಣಾ ಇಲಾಖೆ' ಉಪಕರಣಗಳನ್ನು ಮಾರಾಟ ಮಾಡುವವರಿಂದ ಭ್ರಷ್ಟಾಚಾರದ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್, ಹೊಸ ರಕ್ಷಣಾ ನೀತಿಯನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ.
ಎಕೆನಾಮಿಕ್ ಟೈಮ್ಸ್ ನೊಂದಿಗೆ ಮಾತನಾಡಿರುವ ಮನೋಹರ್ ಪರೀಕ್ಕರ್, ರಕ್ಷಣಾ ಉಪಕರಣಗಳ ಮಾರಾಟದಲ್ಲಿ ನಡೆಯುವ "ಲಾಬಿ"ಯನ್ನು ಸರಿಯಾಗಿ ವ್ಯಾಖ್ಯಾನಿಸಬೇಕಿದೆ. "ಉಪಕರಣಗಳನ್ನು ಮಾರಾಟ ಮಾಡುವಲ್ಲಿ ಪಾರದರ್ಶಕತೆ ಕಾಯ್ದುಕೊಂಡರೆ ಲಾಬಿಯಿಂದ ನಡೆಯುವ ಅವ್ಯವಹಾರಗಳನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ.
ರಕ್ಷಣಾ ಉಪಕರಣಗಳನ್ನು ಮಾರಾಟ ಮಾಡುವ ಕಂಪನಿಗಳೊಂದಿಗೆ ಪಾರದರ್ಶಕ ಮಾತುಕತೆ ನಡೆಸುವ ನೀತಿಯನ್ನು ರೂಪಿಸಿದರೆ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಬಹುದು ಎಂದು ಮನೋಹರ್ ಪರೀಕ್ಕರ್ ಹೇಳಿದ್ದಾರೆ. ಅಲ್ಲದೇ ಭ್ರಷ್ಟಾಚಾರ ನಡೆಸುವ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದಿದ್ದಾರೆ.
ಇತ್ತೀಚೆಗಷ್ಟೇ ರಕ್ಷಣಾ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ಮನೋಹರ್ ಪರೀಕ್ಕರ್ ಅವರಿಗೆ ಅಧಿಕಾರಿಗಳು ಇಲಾಖೆಯ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಆಯುಧಗಳ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮಾಜಿ ರಕ್ಷಣಾ ಸಚಿವ ಅರುಣ್ ಜೇಟ್ಲಿ ಕೆಲವು ಸುಧಾರಣೆಗಳನ್ನು ತಂದಿದ್ದಾರೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಕಂಪನಿಗಳಿಂದ ರಕ್ಷಣಾ ಇಲಾಖೆ ಉಪಕರಣಗಳನ್ನು ಖರೀದಿಸುವುದಕ್ಕೆ ಯುಪಿಎ-2 ಸರ್ಕಾರ ನಿಷೇಧ ಹೇರಿತ್ತು. ಆದರೆ, ಈಗಾಗಲೇ ಕಂಪನಿಗಳಿಂದ ಖರೀದಿಸಿರುವ ಉಪಕರಣಗಳು ಇಲಾಖೆ ಕೈ ಸೇರಬೇಕಿದ್ದ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಯುಪಿಎ ಸರ್ಕಾರದ ಆದೇಶವನ್ನು ಸಡಿಲಗೊಳಿಸಿತ್ತು. ಇದೇ ವೇಳೆ ಯುಪಿಎ ಸರ್ಕಾರ ರಕ್ಷಣಾ ಉಪಕರಣಗಳ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದ ಕಾರಣ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಆಯುಧಗಳು ಹಾಗೂ ಅದರ ಬಿಡಿಭಾಗಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಪಾರದರ್ಶಕತೆ ಕಾಯ್ದುಕೊಳ್ಳಲು ಪರೀಕ್ಕರ್ ಹೊಸ ನೀತಿ ರೂಪಿಸಲು ಮುಂದಾಗಿದ್ದಾರೆ.