ಹರ್ಯಾಣ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬ ಭಾರತ ಬಿಟ್ಟು ಇಟಲಿಗೆ ಸ್ಥಳಾಂತರವಾಗುವ ಯೋಚನೆಯಲ್ಲಿದೆ ಎಂದು ಹರ್ಯಾಣ ಆರೋಗ್ಯ ಸಚಿವ ಅನಿಲ್ ವ್ಯಂಗ್ಯವಾಡಿದ್ದಾರೆ.
ಹರ್ಯಾಣದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು ರಾಬರ್ಟ್ ವಾಧ್ರ ಅವರ ಭೂ ಅಕ್ರಮಗಳ ಬಗ್ಗೆ ತನಿಖೆ ನಡೆಯುವ ಭೀತಿಯಲ್ಲಿರುವ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾಧ್ರ, ನಾಲ್ಕು ಕಂಪನಿಗಳನ್ನು ಬಂದ್ ಮಾಡಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಸಚಿವರು, ಸೋನಿಯಾ ಹಾಗೂ ಅವರ ಕುಟುಂಬ ಇಟಲಿಗೆ ಸ್ಥಳಾಂತರವಾಗುವ ಚಿಂತನೆಯಲ್ಲಿದೆ. ಆದ್ದರಿಂದ ಒಂದೊಂದೇ ಕಂಪನಿಗಳನ್ನು ಮುಚ್ಚುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಆದರೂ ರಾಜ್ಯದಲ್ಲಿ ಭೂ ಅಕ್ರಮ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅನಿಲ್ ತಿಳಿಸಿದ್ದಾರೆ.
ಹರ್ಯಾಣದ ನೂತನ ಬಿಜೆಪಿ ಸರ್ಕಾರ ರಾಬರ್ಟ್ ವಾಧ್ರ ಅವರ ಅಕ್ರಮ ಭೂ ಅವ್ಯವಹಾರ ಪ್ರಕರಣವನ್ನು ತನಿಖೆ ನಡೆಸುತ್ತೇವೆ ಎಂದು ಹೇಳಿತ್ತು. ಈ ಬೆನ್ನಲ್ಲೇ ಹರ್ಯಾಣದಲ್ಲಿರುವ ವಾಧ್ರ ಅವರ 6 ಕಂಪನಿಗಳ ಪೈಕಿ 4 ಕಂಪನಿಳನ್ನು ಮುಚ್ಚಲಾಗಿದೆ. ಏಕಾಏಕಿ ಕಂಪನಿ ಮುಚ್ಚಿರುವ ಬೆಳವಣಿಗೆ ಅಚ್ಚರಿಗೆ ಕಾರಣವಾಗಿದೆ.
ಕಂಪನಿ ವ್ಯವಹಾರಗಳ ಸಚಿವಾಲಯಕ್ಕೆ ನೀಡಿರುವ ದಾಖಲೆಗಳ ಪ್ರಕಾರ, ಹರ್ಯಾಣ ಮತ್ತು ರಾಜಸ್ಥಾನ ರಾಜ್ಯಗಳಲ್ಲಿರುವ ರಾಬರ್ಟ್ ವಾದ್ರಾ ಅವರ 6 ಸಂಸ್ಥೆಗಳ ಪೈಕಿ 4 ಸಂಸ್ಥೆಗಳನ್ನು ಮುಚ್ಚಲಾಗಿದೆ.