ಹರ್ಯಾಣ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾಧ್ರ ಅವರು ಅಕ್ರಮವಾಗಿ ಭೂಮಿ ಪಡೆಯುವುದಕ್ಕೆ ಈ ಹಿಂದೆ ಅಧಿಕಾರದಲ್ಲಿದ್ದ ಭೂಪೇಂದರ್ ಸಿಂಗ್ ಹೂಡ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಸಿಎಜಿ ದೃಢಪಡಿಸಿದೆ.
ಹರ್ಯಾಣದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಾಧ್ರಾ ಸೇರಿದಂತೆ ಹಲವು ಬಿಲ್ಡರ್ ಗಳಿಗೆ ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಮಾಡಿರುವುದನ್ನು ಸಿಎಜಿ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಹರ್ಯಾಣ ವಿಧಾನಸಭೆಯಲ್ಲಿ ಈ ವರದಿಯನ್ನು ಮಂಡಿಸಲಾಗಿದೆ.
ನಗರ ಮತ್ತು ಯೋಜನಾ ಇಲಾಖೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸಿಎಜಿ ವರದಿ, ಭೂಮಿ ಹಂಚಿಕೆಗೆ ತಾತ್ವಿಕ ಒಪ್ಪಿಗೆ ನೀಡುವಾಗಲಾಗಲೀ, ಹಸ್ತಾಂತರದ ಸಂದರ್ಭದಲ್ಲಾಗಲಿ ನಿಯಮಗಳನ್ನು ಪಾಲಿಸಿಲ್ಲ. ಇದರಿಂದ ಡಿ.ಎಲ್.ಎಫ್ ಸೇರಿದಂತೆ ಹವಲು ಬಿಲ್ಡರ್ ಗಳಿಗೆ ಲಾಭವಾಗಿದೆ ಎಂದು ಹೇಳಿದೆ. ವಾಧ್ರ ಸೇರಿದಂತೆ ಯಾರ ಹೆಸರನ್ನೂ ವರದಿಯಲ್ಲಿ ಉಲ್ಲೇಖಿಸದೇ ಸಂಸ್ಥೆಗಳ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ. ಈ ಪಟ್ಟಿಯಲ್ಲಿ ವಾಧ್ರ ಒಡೆತನದ ಡಿ.ಎಲ್.ಎಫ್ ಸಂಸ್ಥೆಯೂ ಇದೆ.
ಶೈಖುಪುರ ಗ್ರಾಮ ಮತ್ತು ಗುರಗಾಂವ್ ಗಳಲ್ಲಿ ಸುಮಾರು 2500 ಎಕರೆ ಅಕ್ರಮ ಭೂ ಹಂಚಿಕೆಯಲ್ಲಿ ಡಿ.ಎಲ್.ಎಫ್ ಹಾಗೂ ಸ್ಕೈಲೈಟ್ ಹಾಸ್ಪಿಟಾಲಿಟಿ ಕಂಪನಿಗಳೇ ಹೆಚ್ಚು ಪಾಲು ಪಡೆದಿದ್ದು, ವಾಧ್ರ ಅವರಿಗೆ ಭೂಮಿ ಮಂಜೂರು ಮಾಡಲು ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ವರದಿಯ ಮೂಲಕ ತಿಳಿದುಬಂದಿದೆ. ಈ ಮೂಲಕ ವಾಧ್ರ ವಿರುದ್ಧ ಅಕ್ರಮ ಭೂ ಕಬಳಿಕೆ ಆರೋಪ ಮಾಡಿದ್ದ ಹಿರಿಯ ಐ.ಎ.ಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರ ಅನುಮಾನ ನಿಜವಾಗಿದೆ.