ಬೆಂಗಳೂರು : ಭೂಮಿ, ಮುಲಸೌಕರ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಸಮರ್ಪಕವಾಗಿ ನೀಡದ ಹಿನ್ನಲೆಯಲ್ಲಿ ರಾಜ್ಯದಲ್ಲಿನ ಪ್ರತಿಷ್ಠಿತ ಕಂಪನಿಗಳು, ಕೈಗಾರಿಕೆಗಳು ವಲಸೆ ಹೋಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿದರು. ಇನ್ಫೋಸಿಸ್ ಗೆ ಭೂಮಿ ನೀಡುವ ಸಂಬಂಧ ಉಂಟಾದ ಅವ್ಯವಸ್ಥೆ ಹಿನ್ನಲೆಯಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಕಂಪನಿಗಳು, ಕೈಗಾರಿಕೆಗಳಿಗೆ ಸಕಾಲದಲ್ಲಿ ಸೌಲಭ್ಯವನ್ನು ಒದಗಿಸದಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ಗುಡುಗಿದ್ದಾರೆ.
ಇನ್ಫೋಸಿಸ್ ಗೆ ಭೂಮಿ ಹಾಗೂ ಇನ್ನಿತರ ಮೂಲಭೂತ ಸೌಕರ್ಯ ನೀಡಲು ಸರ್ಕಾರ ಸಮ್ಮತಿಸಿದರೂ ಮಾಧ್ಯಮಗಳು ಬೇರೆ ರೀತಿ ವರದಿ ನೀಡಲು ಕಾರಣವೇನು ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಇರುವುದರಿಂದ ಸರ್ಕಾರದ ಕಾರ್ಯವೈಖರಿ ಸರಿಯಿಲ್ಲ ಎಂಬ ಆರೋಪ ಕೇಳುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ಈ ವೇಳೆ ವಿವರ ನೀಡಿದ ಅಧಿಕಾರಿಗಳು ಇನ್ಫೋಸಿಸ್ಗೆ ನಿಗದಿಯಾಗಿರುವ ಭೂಮಿಯ ಒಟ್ಟು ಬೆಲೆ 58 ಕೋಟಿ ರೂ.ಗಳಾಗಿದ್ದರೂ ಇನ್ಫೋಸಿಸ್ ಇದಕ್ಕೆ 14 ಕೋಟಿ ರೂ. ಮಾತ್ರ ಕಟ್ಟಿದೆ. ಉಳಿದ 44 ಕೋಟಿ ರೂ. ಪಾವತಿಸಬೇಕಿದೆ. ಉಳಿದ ಮೊತ್ತಕ್ಕೆ 7.64 ಕೋಟಿ ರೂ. ಬಡ್ಡಿಯಾಗಿದ್ದರೂ ರಾಜ್ಯ ಸರ್ಕಾರ ಅದನ್ನು ಮನ್ನಾ ಮಾಡಿದೆ. ಹೀಗಿದ್ದರೂ ಸಹ ಇನ್ಫೋಸಿಸ್ ಮಾತ್ರ ಸ್ಥಳ ಬದಲಾವಣೆ ಬಯಸಿ ಹಣ ಕಟ್ಟದೆ ಸುಮ್ಮನಿದ್ದಾರೆ. ಪ್ರಸ್ತುತ ದೇವನಹಳ್ಳಿಯಲ್ಲಿ 40 ಎಕರೆ ಜಾಗ ನಿಗದಿಪಡಿಸಲಾಗಿತ್ತು. ಇನ್ನು ಹೆಚ್ಚುವರಿಯಾಗಿ 60 ಎಕರೆ ನೀಡಲು ಸರ್ಕಾರ ಸಿದ್ಧವಿದೆ. ಆದರೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜಾಗ ಬೇಕೆಂಬ ಕಾರಣಕ್ಕೆ ಈ ರೀತಿ ಅಪಪ್ರಚಾರ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.