ನವದೆಹಲಿ : ಐಪಿಎಲ್ ಹಗರಣದ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ ವಲಸೆ ಅರ್ಜಿಗೆ ಸಹಿ ಮಾಡಿದ್ದ ದಾಖಲೆಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಮಾರನೆಯ ದಿನವೇ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ’ಆ ಸಹಿ ನನ್ನದೇ' ಎಂದು ಪಕ್ಷದ ನಾಯಕತ್ವದ ಮುಂದೆ ಒಪ್ಪಿಕೊಂಡಿದ್ದಾರೆ.
’ಹೌದು. ಆ ಸಹಿ ನನ್ನದೇ. ಓರ್ವ ಸ್ನೇಹಿತನೆಂದು ಲಲಿತ್ ಮೋದಿ ಅವರಿಗಾಗಿ ಸಹಿ ಮಾಡಿದ್ದೆ' ಎಂದು ಅವರು ತಿಳಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ತಿಳಿಸಿವೆ. ಆದರೆ ಇದೇ ವೇಳೆ ಇನ್ನು ಕೆಲ ಮಾಧ್ಯಮಗಳು, ’ಲಲಿತ್ ಅವರು ತಮ್ಮ ಸಹಿಯನ್ನೇ ಹೋಲುವ ಸಹಿಯನ್ನು ನಕಲು ಮಾಡಿದ್ದಾರೆ ಎಂಬ ಗುಮಾನಿ ರಾಜೇ ಅವರಿಗಿದೆ. ಈ ಹಿನ್ನೆಲೆಯಲ್ಲಿ ಲಲಿತ್ ವಿರುದ್ಧ ಪ್ರಕರಣ ದಾಖಲಿಸುವ ಸಂಬಂಧ ವಸುಂಧರಾ ರಾಜೇ ಕಾನೂನು ತಜ್ನರ ಮೊರೆ ಹೋಗಿದ್ದಾರೆ' ಎಂದು ವರದಿ ಮಾಡಿವೆ.
ಇದರ ಬೆನ್ನಲ್ಲೇ ’ಲಲಿತ್ ಮೋದಿ ಹಗರಣ'ದಲ್ಲಿ ಸಿಲುಕಿರುವ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್, ರಾಜೇ ಮತ್ತು ನಕಲಿ ವಿದ್ಯಾರ್ಹತೆ ವಿವಾದದಲ್ಲಿ ಸಿಲುಕಿರುವ ಸ್ಮತಿ ಇರಾನಿ, ಮಹಾರಾಷ್ಟ್ರದಲ್ಲಿ 206 ಕೋಟಿ ರೂ. ಅಕ್ರಮ ಗುತ್ತಿಗೆ ನೀಡಿದ ಆರೋಪ ಹೊತ್ತಿರುವ ರಾಜ್ಯದ ಸಚಿವೆ ಪಂಕಜಾ ಮುಂಡೆ ಪದಚ್ಯುತಿಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಬಿಗಿಪಟ್ಟು ಮುಂದುವರೆಸಿವೆ. "ಈ ನಾಲ್ವರೂ ಮಹಿಳಾ ಮಂತ್ರಿಗಳನ್ನು ಸರ್ಕಾರ 72 ತಾಸಿನಲ್ಲಿ ವಜಾ ಮಾಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಹೋರಾಟ ಮಾಡುತ್ತೇವೆ' ಎಂದು ಆಪ್ ವಕ್ತಾರ ಆಶುತೋಷ್ ಗಡುವು ವಿಧಿಸಿದ್ದಾರೆ.
ಆದರೆ, ವಿಪಕ್ಷಗಳ ಆರೋಪವನ್ನು ಬಿಜೆಪಿ ವಕ್ತಾರರು ಮತ್ತು ಸರ್ಕಾರದ ಹಿರಿಯ ಮಂತ್ರಿಗಳು ತಿರಸ್ಕರಿಸಿದ್ದು, ’ರಾಜೇ ತಪ್ಪು ಮಾಡಿದ್ದಾರೆ ಎಂದು ಯಾವ ಕೋರ್ಟಿನಲ್ಲೂ ಸಾಬೀತಾಗಿಲ್ಲ. ಹೀಗಾಗಿ ರಾಜೇ ರಾಜೀನಾಮೆ ಪ್ರಶ್ನೆಯೇ ಇಲ್ಲ' ಎಂದಿದ್ದಾರೆ. ಇದರ ನಡುವೆಯೇ, ’ರಾಜೇ ಅವರ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾತ್ತಿರುವ ವರದಿಗಳೆಲ್ಲ ಸುಳ್ಳು. ಇವು ಅವರ ಹೆಸರು ಕೆಡಿಸುವ ತಂತ್ರ' ಎಂದು ಅವರ ಕಚೇರಿ ಸ್ಪಷ್ಟನೆ ನೀಡಿದೆ.