ಇಸ್ಲಾಮಾಬಾದ್ : 'ವಾಘಾ ಗಡಿ'ಯಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ನಡುವಿನ ವ್ಯಾಪಾರ ವಹಿವಾಟುಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಪ್ರತಿನಿತ್ಯ ಪಾಕಿಸ್ತಾನ-ಭಾರತ ಗಡಿ ಪ್ರದೇಶದಲ್ಲಿ ಟ್ರಕ್ ಗಳ ಮೂಲಕ ತರಕಾರಿ, ಹಣ್ಣು ಸೇರಿದಂತೆ ವಿವಿಧ ಉತ್ಪನ್ನಗಳ ವ್ಯಾಪಾರ ನಡೆಯುತ್ತಿತ್ತು. ಆದರೆ ವಾಘಾ ಗಡಿಯಲ್ಲಿ ಸಂಭವಿಸಿರುವ ದುರಂತದಿಂದಾಗಿ ನ.3ರಂದು ಗಡಿ ಪ್ರದೇಶದಲ್ಲಿ ಟ್ರಕ್ ಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಭೂಮಾರ್ಗವಾಗಿ ನಡೆಯುತ್ತಿದ್ದ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗಡಿ ರಕ್ಷಣಾ ಪಡೆ(ಬಿಎಸ್ಎಫ್)ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾನುವಾರ, ನ.೨ರಂದು ಭಾರತ-ಪಾಕಿಸ್ತಾನ ಗಡಿಯಲ್ಲಿ ಉಭಯ ರಾಷ್ಟ್ರಗಳ ಧ್ವಜ ಇಳಿಸಿ ಪರಸ್ಪರ ಗೌರವ ಸಲ್ಲಿಸುವ ಕಾರ್ಯಕ್ರಮ ಮುಗಿದ ಕೆಲವೇ ಹೊತ್ತಿನಲ್ಲಿ ಪಾಕ್ ಗಡಿ ಪ್ರದೇಶದ ವಾಹನ ನಿಲುಗಡೆ ಪ್ರದೇಶದಲ್ಲಿ ಭಾರಿ ಸ್ಫೋಟ ಸಂಭವಿಸಿ ಮೂವರು ಸೇನಾ ಸಿಬ್ಬಂದಿ ಹಾಗೂ 11 ಮಹಿಳೆಯರು ಸೇರಿದಂತೆ 55 ಮಂದಿ ಮೃತಪಟ್ಟಿದ್ದರು.
ಘಟನೆಯಲ್ಲಿ ಅಕ್ಕಪಕ್ಕದ ಅಂಗಡಿ-ಮುಂಗಟ್ಟುಗಳೂ ಧ್ವಂಸವಾಗಿದೆ. ಅಲ್ ಖೈದಾ ಬೆಂಬಲಿತ ಜನಾದುಲ್ಲಾ ಉಗ್ರ ಸಂಘಟನೆ ಈ ಸ್ಫೋಟದ ಹೊಣೆ ಹೊತ್ತಿದೆ. ಘಟನೆ ಸಂಬಂಧ ವರದಿ ನೀಡುವಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಆದೇಶಿಸಿದ್ದಾರೆ.