ನವದೆಹಲಿ : 214 ಕಲ್ಲಿದ್ದಲು ಗಣಿ ಗುತ್ತಿಗೆಯನ್ನು ರದ್ದು ಮಾಡಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ್ದ ಆದೇಶದಿಂದ ಉಂಟಾಗಿರುವ ಪರಿಣಾಮವನ್ನು ತಪ್ಪಿಸುವ ನಿಟ್ಟಿನಲ್ಲಿ ಸುಗ್ರೀವಾಜ್ನೆ ಹೊರಡಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಈ ಕುರಿತು ಕೇಂದ್ರ ಸಚಿವ ಸಂಪುಟ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದೆ. ಈ ಸುಗ್ರೀವಾಜ್ನೆ ಹೊರಬಿದ್ದ ಬಳಿಕ ರದ್ದುಗೊಂಡಿದ್ದ ಕಲ್ಲಿದ್ದಲು ಗಣಿಗಳು ಸರ್ಕಾರದ ವಶಕ್ಕೆ ಬರಲಿವೆ.
ಬಳಿಕ ಕೇಂದ್ರ ಸರ್ಕಾರ ಈ ಗಣಿಗಳನ್ನು ಇ-ಹರಾಜಿನ ಮೂಲಕ ಖಾಸಗಿ ಕಂಪನಿಗಳಿಗೆ ನೀಡಲಿದೆ. ಜೊತೆಗೆ ಸರ್ಕಾರ ಮತ್ತು ಸಾರ್ವಜನಿಕ ಉದ್ದಿಮೆ ವಲಯದ ಕಂಪನಿಗಳಿಗೆ ನೇರವಾಗಿ ಹಂಚಿಕೆ ಮಾಡಲು ಅವಕಾಶ ಸಿಗಲಿದೆ.
ಕಲ್ಲಿದ್ದಲು ಗಣಿ ಹಂಚಿಕೆ ವೇಳೆ ಲೋಪವಾಗಿದೆ ಎಂದು 1993ರಿಂದ 2010ರ ವರೆಗೆ ಹಂಚಿಕೆ ಮಾಡಲಾಗಿದ್ದ, 218 ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ ಪೈಕಿ 214 ಹಂಚಿಕೆಯನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್ ಕಳೆದ ತಿಂಗಳು ಆದೇಶ ಹೊರಡಿಸಿತ್ತು.
ಸುಪ್ರೀಂ ಕೋರ್ಟ್ ಆದೇಶದಿಂದ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆ ಉಂಟಾಗುವ ಭೀತಿ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ತುರ್ತು ಕ್ರಮಕ್ಕೆ ಮುಂದಾಗಿದೆ.
ಮುಂದಿನ 3-4 ತಿಂಗಳಲ್ಲಿ ಇ-ಹರಾಜು ಪ್ರಕ್ರಿಯೆ ಮೂಲಕ ಕಲ್ಲಿದ್ದಲು ಗಣಿಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಸಂಪುಟ ಸಭೆ ಬಳಿಕ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.