ಪ್ಯಾರಿಸ್ : ಯುಪಿಎ ಸರ್ಕಾರ ಕಲ್ಲಿದ್ದಲು ಗಣಿಗಳನ್ನು ಕಳ್ಳೆಪುರಿ ರೀತಿಯಲ್ಲಿ ಹಂಚಿಕೆ ಮಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಪ್ಯಾರಿಸ್ ನಲ್ಲಿ ಎನ್ಆರ್ಐಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದ ಅವರು, `ನೀವು ಕಲ್ಲಿದ್ದಲು ಗಣಿ ಹಂಚಿಕೆ ಹಗರಣದ ಬಗ್ಗೆ ಕೇಳಿರಬಹುದು. ಯಾರನ್ನಾದರೂ ಭೇಟಿಯಾದಾಗ ಪೆನ್ನು ಅಥವಾ ಕರವಸ್ತ್ರ ನೀಡುವಂತೆ 204 ಕಲ್ಲಿದ್ದಲು ಬ್ಲಾಕ್ ಗಳನ್ನು ಹಂಚಿಕೆ ಮಾಡಲಾಯಿತು. ಒಂದು ಪೆನ್ನು ನೀಡುವಾಗಲೂ ಅದನ್ನು ಸರಿಯಾದ ವ್ಯಕ್ತಿಗೆ ನೀಡಿದ್ದೇನೆಯೇ ಎಂದು 10 ಬಾರಿ ನಾವು ಯೋಚಿಸುತ್ತೇವೆ. ಆದರೆ, ಯುಪಿಎ ಸರ್ಕಾರಕ್ಕೆ ಈ ರೀತಿಯ ಆಲೋಚನೆಯೇ ಬಂದಿರಲಿಲ್ಲ' ಎಂದು ಆಕ್ಷೇಪಿಸಿದ್ದಾರೆ.
ಈ ಹಗರಣ ಕೋಲಾಹಲ ಸೃಷ್ಟಿಸಿತು. ಸುಪ್ರೀಂಕೋರ್ಟ್ ಕಲ್ಲಿದ್ದಲು ಹಂಚಿಕೆಯನ್ನು ರದ್ದು ಮಾಡಿತು. ಈ ಹಗರಣದಲ್ಲಿ ಮಾಜಿ ಪ್ರಧಾನಿಯೊಬ್ಬರ ಹೆಸರೂ ಕೇಳಿಬಂತು. ನಾನು ಆ ವಿಚಾರಕ್ಕೆ ಸಂಬಂಧಿಸಿ ಮಾತನಾಡಲು ಅಥವಾ ಟೀಕೆ ಮಾಡಲು ಬಯಸಲ್ಲ ಎಂದು ಮೋದಿ ಹೇಳಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ ಶೇ.10ರಷ್ಟು ಕೆಲಸವಷ್ಟೇ ಆಗಿದೆ. ಯಾವುದೇ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಇಂಥ ಕಾರ್ಯ ಮಾಡಿದರೆ `ಇನ್ನು 25ವರ್ಷ ನೀವೇ ಅಧಿಕಾರ ನಡೆಸಿ' ಎಂದು ಜನ ಹೇಳುತ್ತಾರೆ ಎಂದು ಮೋದಿ ತಿಳಿಸಿದ್ದಾರೆ.
ದೇಶಾದ್ಯಂತ 3.5 ಲಕ್ಷ ಮಂದಿ ತಮ್ಮ ಸಬ್ಸಿಡಿ ಸಹಿತ ಎಲ್.ಪಿ.ಜಿ ಸಂಪರ್ಕವನ್ನು ಸ್ವಯಂಪ್ರೇರಿತವಾಗಿ ನಿರಾಕರಿಸಿದ್ದಾರೆ ಎಂದು ಮೋದಿ ಇದೇ ವೇಳೆ ಹೇಳಿದ್ದಾರೆ.
ಶ್ರೀಮಂತರು ಯಾಕೆ ಎಲ್.ಪಿ.ಜಿ ಸಬ್ಸಿಡಿಯನ್ನು ನಿರಾಕರಿಸಲ್ಲ ಎಂದು ನಾನು ಅಂದಿದ್ದೆ. ಇದಾದ ಒಂದೇ ವಾರದಲ್ಲಿ 2 ಲಕ್ಷ ಮಂದಿ ಸ್ವಯಂ ಪ್ರೇರಿತರಾಗಿ ಎಲ್.ಪಿ.ಜಿ ಸಬ್ಸಿಡಿ ನಿರಾಕರಿಸಿದ್ದಾರೆ. ಗುರುವಾರದವರೆಗೆ ಎಲ್.ಪಿ.ಜಿ ಸಬ್ಸಿಡಿ ಕೈಬಿಟ್ಟವರ ಸಂಖ್ಯೆ 3.5 ಲಕ್ಷ ತಲುಪಿದೆ. ಈ ಹಣ ಸರ್ಕಾರದ ಖಜಾನೆಗೆ ಹೋಗಲ್ಲ. ಅಡುಗೆಗಾಗಿ ಕಟ್ಟಿಗೆಯಲ್ಲೇ ಅವಲಂಬಿಸಿರುವವರಿಗೆ ಶುದ್ಧ ಇಂಧನ ಪೂರೈಸಲು ಬಳಕೆಯಾಗುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.