ನವದೆಹಲಿ : 'ಗ್ರೀನ್ ಪೀಸ್' ಎನ್.ಜಿ.ಒ ಕಾರ್ಯಕರ್ತೆ ಪ್ರಿಯಾ ಪಿಳ್ಳೈ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.
ಲಂಡನ್ ಗೆ ತೆರಳಬೇಕಿದ್ದ ಪ್ರಿಯಾ ಪಿಳ್ಳೈ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿತ್ತು. ಪ್ರಿಯಾ ಪಿಳ್ಳೈ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುತ್ತಿರುವ ಸಭೆಯೊಂದರಲ್ಲಿ ಭಾಗವಹಿಸಲು ಲಂಡನ್ ಗೆ ತೆರಳುತ್ತಿದ್ದಾರೆ ಎಂಬ ಗುಪ್ತಚರ ಇಲಾಖೆ ಅಧಿಕಾರಿಗಳ ಲುಕ್ ಔಟ್ ನೋಟಿಸ್ ಆಧರಿಸಿ ಆಕೆಯ ಪ್ರಯಾಣವನ್ನು ತಡೆಹಿಡಿಯಲಾಗಿದೆ ಎಂದು ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಪ್ರಿಯಾ ಪಿಳ್ಳೈ ಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನೂ ಸಹ ಸಂಜಯ್ ಜೈನ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದಾರೆ. ಪ್ರಿಯಾ ಪಿಳ್ಳೈ ಮಾತ್ರವಲ್ಲದೇ ಆಕೆ ಪ್ರತಿನಿಧಿಸುತ್ತಿರುವ ಗ್ರೀನ್ ಪೀಸ್ ಎನ್.ಜಿ.ಒ ಸಹ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಸಂಜಯ್ ಜೈನ್ ಮಾಹಿತಿ ನೀಡಿದ್ದಾರೆ.
ತಮ್ಮ ಲಂಡನ್ ಪ್ರಯಾಣಾವನ್ನು ತಡೆಹಿಡಿದಿದ್ದನ್ನು ಪ್ರಶ್ನಿಸಿದ್ದ ಪ್ರಿಯಾ ಪಿಳ್ಳೈ, ಕೇಂದ್ರ ಸರ್ಕಾರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿದ್ದರು. ಪ್ರಿಯಾ ಪಿಳ್ಳೈ ವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಲಂಡನ್ ಪ್ರಯಾಣವನ್ನು ತಡೆಹಿಡಿದಿದ್ದಕ್ಕೆ ಸೂಕ್ತ ಕಾರಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ಪ್ರಿಯಾ ಪಿಳ್ಳೈ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದಿದೆ.
ಮಧ್ಯಪ್ರದೇಶದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯ ವಿರೋಧಿಸಿ ಪ್ರಿಯಾ ಪಿಳ್ಳೈ ಜನಜಾಗೃತಿ ಮೂಡಿಸಲು ಆಂದೋಲನ ನಡೆಸಿದ್ದರು. ಆಂದೋಲನದ ಬಗ್ಗೆ ಮಾತನಾಡುವಂತೆ ಬ್ರಿಟಿಷ್ ಸಂಸದರು ಪ್ರಿಯಾ ಪಿಳ್ಳೈಯನ್ನು ಲಂಡನ್ ಗೆ ಆಹ್ವಾನಿಸಿದ್ದರು.