ನವದೆಹಲಿ : ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಐ.ಎಸ್.ಐ.ಎಸ್ ಹಾಗೂ ಅಲ್-ಖೈದಾ ಉಗ್ರ ಸಂಘಟನೆ ಸಂಚು ರೂಪಿಸಿವೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ದೇಶದ ಪ್ರವಾಸಿ ತಾಣಗಳು, ಮೆಟ್ರೋ ಸಿಟಿಗಳನ್ನು ಗುರಿಯಾಗಿಸಿಕೊಂಡಿರುವ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಅ.16ರಂದು ದೆಹಲಿಯಲ್ಲಿ ಎನ್.ಎಸ್.ಜಿ ಡಿ.ಜಿ ಜಯಂತ್ ಚೌಧರಿ ಈ ವಿಷಯ ಬಹಿರಂಗಪಡಿಸಿದ್ದಾರೆ.
ಬೆಂಗಳೂರು,ಗೋವಾ ಸೇರಿದಂತೆ ಪ್ರಮುಖ ನಗರಗಳು ಉಗ್ರರ ಹಿಟ್ ಲಿಸ್ಟ್ ನಲ್ಲಿವೆ ಎಂದು ಜಯಂತ್ ಚೌಧರಿ ತಿಳಿಸಿದ್ದಾರೆ. ಎನ್.ಎಸ್.ಜಿ ಡಿ.ಜಿ ಮಾಹಿತಿ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.
ಭಯೋತ್ಪಾದನೆ ತಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆಯಬೇಕು:
ಇದೇ ವೇಳೆ ಗುರಗಾಂವ್ ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಭದ್ರತಾ ಗಾರ್ಡ್(ಎನ್.ಎಸ್.ಜಿ)ಯ 30ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಯೋತ್ಪಾದನೆ ಕೇವಲ ಒಂದು ದೇಶದ ಸಮಸ್ಯೆ ಅಲ್ಲ. ಉಗ್ರವಾದವನ್ನು ಎದುರಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದ್ದಾರೆ.
ಭಯೋತ್ಪಾದಕರು, ಸಮಾಜಘಾತುಕ ಶಕ್ತಿಗಳನ್ನು ಎದುರಿಸಲು ನಮ್ಮ ಭದ್ರತಾ ಪಡೆಗಳು ಸಮರ್ಥವಾಗಿವೆ ಎಂದಿರುವ ರಾಜನಾಥ್ ಸಿಂಗ್, ಕೇಂದ್ರ ಸರ್ಕಾರ ಮಹಿಳಾ ಕಮಾಂಡೋಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ. ದೇಶಕ್ಕಾಗಿ ಮಡಿದ ಕಮಾಂಡೋಗಳಿಗೆ, ಎನ್.ಎಸ್.ಜಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ರಾಜನಾಥ್ ಸಿಂಗ್ ನಮನ ಸಲ್ಲಿಸಿದ್ದಾರೆ.