ಮಹೇಂದ್ರಗರ್ : ಹಗರಣ ಮುಕ್ತ ಹರ್ಯಾಣವನ್ನು ನಿರ್ಮಾಣ ಮಾಡಬೇಕಿದೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಗೆ ಮತನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಹರ್ಯಾಣದಲ್ಲಿ ನಡೆಯುತ್ತಿರುವ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹರ್ಯಾಣ ರಾಜ್ಯವನ್ನು ಬದಲಿಸುವ ಸಮಯಬಂದಿದೆ. ಹಗರಣಗಳಿಂದ ತತ್ತರಿಸಿರುವ ಹರ್ಯಾಣವನ್ನು ಕೌಶಲ್ಯಭರಿತ ರಾಜ್ಯವನ್ನಾಗಿ ಪರಿವರ್ತನೆ ಮಾಡುತ್ತೇವೆ. ಅದಕ್ಕಾಗಿ ಬಹುಮತ ನೀಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಹರ್ಯಾಣ ಹಗರಣಭರಿತ ರಾಜ್ಯವಾಗಿಕುಖ್ಯಾವಾಗಿರುವುದಕ್ಕೆ ನಿಮಗೆಲ್ಲ ಖೇದವಿದೆ ಎಂದು ನನಗೆ ಗೊತ್ತಿದೆ.ಹರ್ಯಾಣ ಭವಿಷ್ಯವನ್ನು ಬದಲಾಯಿಸಿ ಕೇಂದ್ರದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಬೇಕಿದೆ. ರಾಜ್ಯದಲ್ಲಿನ ಹಗರಣಗಳ ಬಗ್ಗೆ ಇಲ್ಲಿನ ಜನತೆಗೂ ಬೇಸರವಿದೆ. ಕಳೆದ 25 ವರ್ಷಗಳಿಂದ ಹರ್ಯಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಕಾರಣ ಇಲ್ಲಿ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಿದೆ. ನಾಲ್ಕೈದು ಕುಟುಂಬಗಳು ಇಡೀ ಹರ್ಯಾಣವನ್ನು ನಿಯಂತ್ರಿಸುತ್ತಿವೆ. ಹೀಗಾಗಿ ಹರ್ಯಾಣದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು, ಜನಸಾಮಾನ್ಯರ ಬದುಕೂ ಸಂಕಷ್ಟಕ್ಕೀಡಾಗಿದೆ ಎಂದರು.
ಈಗ ಬದಲಾವಣೆಯ ಸಮಯ ಬಂದಿದೆ. ಹರ್ಯಾಣವನ್ನು ಅಭಿವೃದ್ಧಿ ಪಡಿಸಬೇಕು, ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂದರೆ ಈ ಬಗ್ಗೆ ನೀವು ನಿರ್ಧರಿಸಬೇಕು. ಬಹುಮತದ ಮೂಲಕ ಬಿಜೆಪಿ ಸರ್ಕಾರವನ್ನು ಅಧಿಕಾರ ತರುವಂತಹ ಹೊಸ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ಹಗರಣಗಳ ಹರ್ಯಾಣ ಬೇಕೋ ಅಥವಾ ಕೌಶಲ್ಯಭರಿತ ಹರ್ಯಾಣ ಬೇಕೋ ಎಂಬುದನ್ನು ನೀವೇ ನಿರ್ಧರಿಸಬೇಕು ಆಯ್ಕೆ ನಿಮ್ಮಮುಂದಿದೆ ಎಂದು ತಿಳಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದ ಮೋದಿ, ರಾಜ್ಯದಲ್ಲಿ ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಗಳಿಗೆ ಉತ್ತೇಜನ ನೀಡಿ ಅಭಿವೃದ್ಧಿ ಹರ್ಯಾಣ ನಿರ್ಮಾಣಮಾಡಲು ಬಯಸುವುದಾಗಿ ತಿಳಿಸಿದರು.
ಇಲ್ಲಿನ ಜನರು ಅನ್ನಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗುವಂತಾಗಬಾರದು ಎಂದ ಮೋದಿ, ರೈತರಿಗೆ ನೀರು, ವಿದ್ಯುತ್ ನೀಡಿದರೆ ಚಿನ್ನದ ಬೆಳೆ ಬೆಳೆಯುತ್ತಾರೆ. ಇದಕ್ಕೆ ಪೂರಕವಾಗಿ ಭ್ರಷ್ಟಾಚಾರ ಮುಕ್ತ ರಾಜ್ಯವನ್ನು ನಾವೆಲ್ಲ ಸೇರಿ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು.