ಶ್ರೀನಗರ : ಜಮ್ಮು-ಕಾಶ್ಮೀರದ ನಿರಾಶ್ರಿತರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಲ್ಲಿನ ಕಿಶ್ ತ್ವಾರ್ ನಲ್ಲಿ ನಡೆದ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಮಂತ್ರವನ್ನು ಪಠಿಸಿದರು.
ನಾನ್ಯಾಕೆ ಜಮ್ಮು ಕಾಶ್ಮೀರವನ್ನು ಅಷ್ಟೊಂದು ಇಷ್ಟಪಡುತ್ತಿದ್ದೇನೆ ಎಂದು ಎಲ್ಲರಿಗೂ ಕುತೂಹಲವಿರಬಹುದು. ನಾನಿಲ್ಲಿ ಅಟಲ್ ಜಿ ಮಾಡಿದ ಕಾರ್ಯಗಳನ್ನು ಮುಂದುವರಿಸಲು ಬಂದಿದ್ದೇನೆ.
ನಾನು ಕಾಶ್ಮೀರಕ್ಕೆ ಬಂದಾಗಲೆಲ್ಲಾ ಇಲ್ಲಿನ ಅಭಿವೃದ್ಧಿ ಬಗ್ಗೆ ಮಾತನಾಡುತ್ತೇನೆ. ನನ್ನ ರಾಜ್ಯ ಗುಜರಾತ್ನಲ್ಲಿರುವ ಕಚ್ನಲ್ಲಿ ಅಭಿವೃದ್ಧಿ ಸಾಧ್ಯವಾಗುವುದಾದರೆ ಕಾಶ್ಮೀರದಲ್ಲಿ ಯಾಕೆ ಸಾಧ್ಯವಿಲ್ಲ?
ಕಚ್ಗೆ ಯಾರಾದರೂ ವರ್ಗಾವಣೆಯಾಗಿ ಬಂದರೆ ಅದು ಅವರಿಗೆ ಶಿಕ್ಷೆಯಾಗಿತ್ತು. ಆದರೆ ಈಗ ಕಚ್ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುವ ಜಿಲ್ಲೆಯಾಗಿ ಮಾರ್ಪಾಡಾಗಿದೆ ಎಂದು ಮೋದಿ ಹೇಳಿದ್ದಾರೆ.
ಕಾಶ್ಮೀರದ ಅಭಿವೃದ್ಧಿಗೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಮುತುವರ್ಜಿ ವಹಿಸಿಲ್ಲ ಎಂದು ಆರೋಪಿಸಿದ ಮೋದಿ, ಇಲ್ಲಿರುವ ಎರಡು ಕುಟುಂಬಗಳು ಕಾಶ್ಮೀರದಲ್ಲಿ ಅಧಿಕಾರವನ್ನು ಚಲಾಯಿಸುತ್ತಿವೆ. ಇವೆರಡು ಒಪ್ಪಂದ ಮಾಡಿಕೊಂಡು 5 ವರ್ಷ ಒಬ್ಬರು, ಮುಂದಿನ 5 ವರ್ಷ ಮತ್ತೊಬ್ಬರು ಎಂಬಂತೆ ಅಧಿಕಾರ ನಡೆಸಿ ಕಾಶ್ಮೀರವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಪ್ರವಾಹ ಬಂದಾಗಲೆಲ್ಲಾ ರಾಜ್ಯ ಸರ್ಕಾರ ಜನರನ್ನು ಚೆನ್ನಾಗಿ ಲೂಟಿ ಮಾಡುತ್ತದೆ ಎಂದು ಒಮರ್ ಅಬ್ದುಲ್ಲಾ ಸರ್ಕಾರದ ಮೇಲೆ ಕಿಡಿ ಕಾರಿದ ಮೋದಿ, ಕಳೆದ 50 ವರ್ಷಗಳಲ್ಲಿ ಇಲ್ಲಿನ ನಿರಾಶ್ರಿತರ ಸಮಸ್ಯೆಗಳು ಬಗೆ ಹರಿದಿಲ್ಲ, ನಿರಾಶ್ರಿತರ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ಅದಕ್ಕಾಗಿ ನಮಗೆ ಮತ ನೀಡಿ, ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.