ಹಿಸಾರ್ : ಹರ್ಯಾಣ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ ನಲ್ಲಿ ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಹರ್ಯಾಣ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಿಸಾರ್ ನಲ್ಲಿ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿದ ಅವರು, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. ನಾನು ಇಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿಲ್ಲ, ನಿಮ್ಮನ್ನು ಅಭಿನಂದಿಸಲು ಬಂದಿದ್ದೇನೆ ಎಂದ ಮೋದಿ, ಹರ್ಯಾಣ ಕ್ರೀಡಾಪಟುಗಳಿಂದ ದೇಶದ ಕೀರ್ತಿ ಹೆಚ್ಚಿದೆ. ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆ ಎಂದು ತಿಳಿಸಿದರು.
ಹರ್ಯಾಣ ರಾಜ್ಯ ಒಳ್ಳೆಯ ದಿನಗಳನ್ನು ಹಾಗೂ ಕೆಟ್ಟದಿನಗಳನ್ನು ಎರಡನ್ನೂ ನೋಡಿದೆ. ಬಿಜೆಪಿ, ಚಾಯ್ ವಾಲಾನನ್ನು ಪ್ರಧಾನಿಯನ್ನಾಗಿ ಮಾಡಿದೆ. ಹರ್ಯಾಣದ ಅಭಿವೃದ್ಧಿಗಾಗಿ ಬಿಜೆಪಿ ಚುನಾವಣೆಯನ್ನು ಎದುರಿಸುತ್ತದೆ ಎಂದ ಮೋದಿ, ಉತ್ತಮ ಆದಳಿತಕ್ಕಾಗಿ ನಾವು ಹೋರಾಡುತ್ತೇವೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕೆಲವರು ಜೈಲಿನಿಂದ ಪ್ರತಿಜ್ನಾವಿಧಿ ಕೈಗೊಳ್ಳುವ ಕನಸು ಕಾಣುತ್ತಿದ್ದಾರೆ. ಕುಟುಂಬ ರಾಜಕಾರಣದಿಂದ ಹರ್ಯಾಣ ರಜ್ಯವನ್ನು ಮುಕ್ತಗೊಳಿಸಬೇಕಾಗಿದೆ. ಹೂಡಾ ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹರ್ಯಾಣದಲ್ಲಿ ರಾಜಕಾರಣಿಗಳಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಕೌನ್ ಬನೇಗಾ ಕರೋಡ್ ಪತಿ ನೀವೆಲ್ಲಾ ನೋಡಿದ್ದೀರಿ. ಹಾಗೇ ಹರ್ಯಾಣದಲ್ಲಿ ಕೌನ್ ಬನೇಗಾ ಅರಬ್ ಪತಿ ಸ್ಪರ್ಧೆ ಏರ್ಪಟ್ಟಿದೆ ಎಂದು ಲೇವಡಿ ಮಾಡಿದರು.
ಎಲ್ಲರೂ ಒಗ್ಗೂಡಿ ಹರ್ಯಾಣದ ಭಾಗ್ಯ ಬದಲಿಸೋಣ, ಇದರ ನಿರ್ಣಯವನ್ನು ನೀವು ಕೈಗೊಳ್ಳಬೇಕು ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಿದ್ದೀರಿ. ನಿಮ್ಮ ಆಶೀರ್ವಾದದಿಂದಾಗಿ ಕೇಂದ್ರದಲ್ಲಿ ಬಲಿಷ್ಠ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹರ್ಯಾಣ ರಾಜ್ಯದಲ್ಲೂ ಬಲಿಷ್ಠ ಸರ್ಕಾರ ನಿರ್ಮಾಣ ಮಾಡಿ ಎಂದು ಕರೆ ನೀಡಿದರು.
25 ವರ್ಷಗಳ ರಾಜ್ಯದ ಇತಿಹಾಸ ತಿರುವಿ ನೋಡಿ ಪ್ರಜಾಪ್ರಭುತ್ವ ಉಳಿಯಲು ಬಿಟ್ಟಿಲ್ಲ. ಹರ್ಯಾಣ ಸರ್ಕಾರದಿಂದ ರೈತರಿಗೆ ಅನ್ಯಾಯವಾಗಿದೆ. ಇಲ್ಲಿನ ರಾಜಕಾರಣಿಗಳು ಲೂಟಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನ.14ರಂದು ಚಾಚಾ ನೆಹರು ಅವರ 125ನೇ ಜನ್ಮದಿನಾಚರಣೆ ನ.19ರಂದು ಮಾಜಿ ಪ್ರಧಾನಿ ಇಂದಿರಾ ಗಾಧಿಯವರ ಜನ್ಮದಿನಾಚರಣೆ. ಈ ಹಿನ್ನಲೆಯಲ್ಲಿ ನ.14ರಿಂದ 19ರವರೆಗೆ ಮಕ್ಕಳಿಗೆ ಸ್ವಚ್ಛತೆ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.