ನವದೆಹಲಿ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಸಂಬಂಧಿಸಿದಂತೆ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಸಂಪುಟ ತೊರೆಯುವುದಿಲ್ಲ ಎಂದು ಶಿವಸೇನೆ ಮುಖಂಡ, ಕೇಂದ್ರ ಸಚಿವ ಅನಂತ್ ಗೀತೆ ಸ್ಪಷ್ಟಪಡಿಸಿದ್ದಾರೆ.
ಸೀಟು ಹಂಚಿಕೆ ವಿಷಯದಲ್ಲಿ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯವಿರಬಹುದು ಆದರೆ ಎಂದಿಗೂ ಶಿವಸೇನೆ ಎನ್.ಡಿ.ಎ ಮೈತ್ರಿಕೂಟ ತೊರೆಯುವುದಿಲ್ಲ ಎಂದು ಅನಂತ್ ಗೀತೆ ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದ ಹಿನ್ನೆಲೆಯಲ್ಲಿ ಶಿವಸೇನೆ ಹಾಗೂ ಬಿಜೆಪಿಯ 'ಮಹಾ' ಮೈತ್ರಿ ಮುರಿದುಬಿದ್ದಿತ್ತು. ಈ ಬಗ್ಗೆ ಅ.1ರಂದು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅನಂತ್ ಗೀತೆ, ಎನ್.ಡಿ.ಎ ಯೊಂದಿಗೆ ಮೈತ್ರಿ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಎನ್.ಡಿ.ಎ ಸರ್ಕಾರ ರಚನೆಯಲ್ಲಿ ಶಿವಸೇನೆಯ ಕೊಡುಗೆ ಅಪಾರವಿದೆ. ಮಹಾರಾಷ್ಟ್ರದಿಂದ ಎನ್.ಡಿ.ಎ ಮೈತ್ರಿಕೂಟದಿಂದ 42ಸಂಸದರು ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಚನೆಯಲ್ಲಿ ಶಿವಸೇನೆ ಮಹತ್ವದ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅನಂತ್ ಗೀತೆ ಹೇಳಿದ್ದಾರೆ.