ನ್ಯೂಯಾರ್ಕ್ : ನ್ಯೂಯಾರ್ಕ್ ನ ಮ್ಯಾಡಿಸನ್ ಗಾರ್ಡನ್ ನಲ್ಲಿ ನೆರೆದಿದ್ದ 18 ಸಾವಿರಕ್ಕೂ ಅನಿವಾಸಿ ಭಾರತೀಯರಿಗೆ ಭಾನುವಾರ ಅವಿಸ್ಮರಣೀಯ ದಿನ. ತಮ್ಮ ನೆಚ್ಚಿನ ನಾಯಕನ ಮಾತಿನ ಮೋಡಿಗೆ ಹುಚ್ಚೆದ್ದು ಕುಣಿದ ಅಭಿಮಾನಿಗಳು.
ಬಹುಕಾಲದಿಂದ ನಿರೀಕ್ಷೆಯಿಂದ ಕಾದಿದ್ದ ಅನಿವಾಸಿ ಭಾರತೀಯರ ಪಾಲಿಗೆ ಮೋದಿಯವರನ್ನು ಕಣ್ಣಾರೆ ಕಂಡು ಅವರ ಭಾಷಣ ಕೇಳಿದ್ದು ಸಾರ್ಥಕತೆ ತಂದುಕೊಟ್ಟಿತು. ಮೋದಿ ಇತಿಹಾಸವನ್ನೇ ಸೃಷ್ಟಿಸಿಬಿಟ್ಟರು.
ಕಿಕ್ಕಿರಿದು ತುಂಬಿದ್ದ ಪ್ರತಿಷ್ಠಿತ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಸಭಾಂಗಣದಲ್ಲಿ 18ಸಾವಿರ ಹಲವಾರು ಅಮೆರಿಕಾದ ರಾಜಕೀಯ ನಾಯಕರು ಸೇರಿದಂತೆ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವನ್ನು ವಿಶ್ವದ ಹೊಸ ಶಕ್ತಿ ಕೇಂದ್ರವಾಗಿ ಮಾಡುವ ತಮ್ಮ ಕನಸನ್ನು ತೆರೆದಿಟ್ಟರು.
ಭಾರತವನ್ನು ವಿಶ್ವದ ಹೊಸ ಶಕ್ತಿ ಕೇಂದ್ರವನ್ನಾಗಿ ಮಾಡಲಾಗುವುದು. ಭಾರತವೀಗ ಯುವ ಸಮೂಹದ ಅಪೂರ್ವ ಶಕ್ತಿಯನ್ನು ಹೊಂದಿದ್ದು, ವಿಶ್ವದ ಅತ್ಯಂತ ಮುಂದುವರೆದ ದೇಶವಾಗಿ ಹೊರಹೊಮ್ಮುವ ಎಲ್ಲಾ ಅವಕಾಶವನ್ನೂ ಹೊಂದಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ದೇಶದ ಜನರು ಬದಲಾವಣೆ ಬಯಸಿ ನಮಗೆ ಅಧಿಕಾರ ನೀಡಿದ್ದಾರೆ. ಅಧಿಕಾರ ಎಂದರೆ ಸೇವೆಯ ಅವಕಾಶ ಎಂದರ್ಥ. ಭಾರತವೀಗ ಯುವ ಸಮೂಹದ ಅಪೂರ್ವ ಶಕ್ತಿಯನ್ನು ಹೊಂದಿದ್ದು, ವಿಶ್ವದ ಮುಂದುವರಿದ ದೇಶವಾಗಿ ಹೊರಹೊಮ್ಮುವ ಅವಕಾಶವನ್ನೂ ಹೊಂದಿದೆ. ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಭಾರತಕ್ಕೆ ಮರಳುವ ಪ್ರತಿಭಾನ್ವಿತ ಅನಿವಾಸಿ ಭಾರತೀಯರಿಗೆ ಆತ್ಮೀಯ ಸ್ವಾಗತ ಕೋರುವುದಾಗಿ ಮೋದಿ ಹೇಳಿದ್ದಾರೆ.
ಪ್ರಜಾಪ್ರಭುತ್ವ ಜನರಚನೆ ಮತ್ತು ಬೇಡಿಕೆ ಭಾರತದ ವಿಶಿಷ್ಟ ಶಕ್ತಿಯಾಗಿದೆ. ಇವುಗಳನ್ನು ಮುಂದಿಟ್ಟುಕೊಂಡು, ದೇಶ ಹೊಸ ದಿಕ್ಕಿನಲ್ಲಿ ಸಾಗಲಿದೆ. 21ನೇ ಶತಮಾನದ ಏಷ್ಯಾ ದೇಶಗಳದ್ದು, ಬನ್ನಿ ದೇಶದ ಹೊಸ ಅಭ್ಯುದಯದ ಪಾಲುದಾರರಾಗಿ ಎಂದು ಮೋದಿ ಕರೆ ನೀಡಿದರು.
ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳೆಂದರೆ- ಪರ್ಸನ್ ಆಫ್ ಇಂಡಿಯನ್ ಓರಿಜನ್ ಕಾರ್ಡ್ ಹೊಂದಿದ ಅನಿವಾಸಿ ಭಾರತೀಯರಿಗೆ ಆಜೀವ ವೀಸಾ ನೀಡಿಕೆ. ಸುದೀರ್ಘ ಅವಧಿ ತಂಗಿದ್ದ ವೇಳೆ ಪೊಲೀಸ್ ಠಾಣೆಗೆ ಭೇಟಿ ನೀಡುವುದರಿಂದ ವಿನಾಯಿತಿ. ಭಾರತಕ್ಕೆ ಪ್ರವಾಸ ಕೈಗೊಳ್ಳುವ ಅಮೆರಿಕಾ ಪ್ರವಾಸಿಗರಿಗೆ ಸುದೀರ್ಘ ವೀಸಾ ನೀಡಿಕೆ. ವೀಸಾ ಆನ್ ಅರೈವಲ್ ಸೌಲಭ್ಯ ಜಾರಿ.
ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರ ನಮಾಮಿ ಗಂಗಾ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯಲ್ಲಿ ಎಲ್ಲಾ ಅನಿವಾಸಿ ಭಾರತೀಯರು ಭಾಗವಹಿಸುವಂತೆ ಆಹ್ವಾನ.
ಒಂದು ಕಾಲದಲ್ಲಿ ನಮ್ಮನ್ನು ಹಾವಾಡಿಗರ ದೇಶ ಎನ್ನಲಾಗುತ್ತಿತ್ತು. ಇದೀಗ ನಾವು ಮೌಸ್ ಜತೆಗೆ ಆಡುತ್ತಿದ್ದೇವೆ. ದೇಶದ ಇಮೇಜ್ ನ್ನು ಬದಲಿಸುವಲ್ಲಿ ಎನ್.ಆರ್.ಐಗಳ ಶ್ರಮ ಅಪೂರ್ವ.
2022ರ ವೇಳೆಗೆ ದೇಶದ ಯಾವುದೇ ಕುಟುಂಬ ಕೂಡ ಸೂರಿಲ್ಲದ ಸ್ಥಿತಿಯಲ್ಲಿ ಇರಬಾರದು ಎಂಬುದು ಸರ್ಕಾರದ ಆಶಯ. ದೇಶದ 75ವರ್ಷದ ಸಂಭ್ರಮಾಚರಣೆಗೆ ಇದು ನಮ್ಮ ಕೊಡುಗೆ.
21ನೇ ಶತಮಾನ ಏಷ್ಯಾ ಖಂಡಕ್ಕೆ ಸೇರಿದ್ದು, ನಮ್ಮದು ಯುವಕರಿಂದ ತುಂಬಿದ ದೇಶ. ದೇಶದ ಶೇ.65ರಷ್ಟು ಜನ 35ರ ವಯೋಮಾನಕ್ಕಿಂತ ಕಡಿಮೆ ವಯಸ್ಸಿನವರು. ಹೀಗಾಗಿ ನಿರಾಶೆಗೆ ಕಾರಣ ಇಲ್ಲವೇ ಇಲ್ಲ. ನಮ್ಮ ಯುವಕರ ಕೌಶಲ್ಯ, ನಮ್ಮನ್ನು ಜಗತ್ತಿನ ಮುಂಚೂಣಿ ರಾಷ್ಟ್ರವಾಗಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.