ನವದೆಹಲಿ : ಮೂರು ದಿನಗಳ ಭಾರತದ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಈ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟದ ಸದಸ್ಯರು ಉಪಸ್ಥಿತರಿದ್ದರು. ರಾಷ್ಟ್ರಪತಿ ಭೇಟಿ ಬಳಿಕ ಮಾತನಾಡಿದ ಕ್ಸಿ ಜಿನ್ ಪಿಂಗ್, ಉಭಯ ರಾಷ್ಟ್ರಗಳ ಸ್ನೇಹ ಸಂಬಂಧವನ್ನು ಇನ್ನಷ್ಟು ಭದ್ರಗೊಳಿಸಬೇಕು. ಆಯಕಟ್ಟಿನ ಒಪ್ಪಂದಗಳಿಗೆ ನಾವು ಬದ್ಧ ಎಂದರು.
ಭಾರತಕ್ಕೆ ಇದು ನನ್ನ ಮೊದಲ ಭೇಟಿ. ಭಾರತ-ಚೀನಾ ಸಂಬಧ ತುಂಬಾ ಹಳೆಯದ್ದು, ನಾವು ಸ್ನೇಹ, ಬಾಂಧವ್ಯವನ್ನು ವೃದ್ಧಿಗೊಳಿಸುವ ಕಾಲ ಸನ್ನಿಹಿತವಾಗಿದೆ. ನಾವು ಸಾಮನ್ಯ ಅಭಿವೃದ್ಧಿಯ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಬಳಿಕ ಜಿನ್ ಪಿಂಗ್ ದಂಪತಿ ರಾಜಘಾಟ್ ಗೆ ತೆರಳಿ ಬಾಪೂಜಿ ಸಮಾಧಿಗೆ ವಂದಿಸಿದರು.ನಂತರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಕ್ಸಿ ಜಿನ್ ಪಿಂಗ್ ಸೌಹಾರ್ದಯುತ ಮಾತುಕತೆ ನಡೆಸಿದರು.
ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಈ ವೇಳೆ ಭಾರತದ ಗಡಿಯಲ್ಲಿ ಚೀನಾ ಒಳ ನುಸುಳುವಿಕೆ, ಅತಿಕ್ರಮಣದ ವಿಷಯವನ್ನು ಪ್ರಧಾನಿ ಮೋದಿ ಪ್ರಸ್ತಾಪ ಮಾಡುವ ನೀರೀಕ್ಷೆಯಿದೆ.