ಬೆಂಗಳೂರು : ಕೆ.ಎಂ.ಎಫ್ ಅಧ್ಯಕ್ಷ ಗಾದಿಗಾಗಿ ಉಂಟಾಗಿದ್ದ ತೀವ್ರ ಪೈಪೋಟಿಗೆ ತೆರೆ ಬಿದ್ದಿದೆ. ಕೆ.ಎಂ.ಎಫ್ ನ ನೂತನ ಅಧ್ಯಕ್ಷರಾಗಿ ಪಿ.ನಾಗರಾಜ್ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಸ್ಪಷ್ಟಪಡಿಸಿರುವ ಸಹಕಾರ ಸಚಿವ ಮಹದೇವ್ ಪ್ರಸಾದ್, ಮೊದಲ 2 ವರ್ಷಗಳ ಅವಧಿಗೆ ನಾಗರಾಜ್ ಅವರನ್ನು ಕೆ.ಎಂ.ಎಫ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನಂತರದ ಮೂರುವರ್ಷಗಳಿಗೆ ಎಂ.ಪಿ.ರವೀಂದ್ರ ಅವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಕೆ.ಎಂ.ಎಫ್ ಅಧ್ಯಕ್ಷರ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ಮಹದೇಪ್ರಸಾದ್ ಹಾಗೂ ಸಚಿವ ಡಿ.ಕೆ.ಶಿವಕುಮರ್ ಕ್ರಮವಾಗಿ ಎಂ.ಪಿ.ರವೀಂದ್ರ ಹಾಗೂ ಪಿ.ನಾಗರಾಜ್ ಅವರ ಪರ ತೀವ್ರ ಲಾಬಿ ನಡೆಸಿದ್ದರು. ಈ ಲಾಬಿ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ.ಎಂ.ಎಫ್ ನಿರ್ದೇಶಕರ ಬೆಂಬಲ ಯಾರಿಗೆ ಹೆಚ್ಚಿದೆಯೋ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಿದ್ದರು.
ಕೆ.ಎಂ.ಎಫ್ ನಲ್ಲಿ ಇರುವ 11 ಜನ ಕಾಂಗ್ರೆಸ್ ಪಕ್ಷದ ನಿರ್ದೇಶಕರ ಪೈಕಿ 9 ಜನ ನಾಗರಾಜ್ ಹೆಸರು ಸೂಚಿಸಿದ ಹಿನ್ನಲೆಯಲ್ಲಿ ನಾಗರಾಜ್ ಕಣಕ್ಕಿಳಿಯಲು ಕಾಂಗ್ರೆಸ್ ನಾಯಕರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ ಮಹದೇವ್ ಪ್ರಸಾದ್ ನಿವಾಸದಲ್ಲಿ ಈ ಸಂಬಂಧ ಸಭೆ ನಡೆದಿದ್ದು, ಸಭೆಯಲ್ಲಿ ನಾಗರಾಜ್ ಹೆಸರನ್ನು ಒಮ್ಮತದಿಂದ ಸೂಚಿಸಲಾಗಿದೆ.
ಕೆ.ಎಂ.ಎಫ್ ಅಧ್ಯಕ್ಷ ಆಯ್ಕೆ ಹಿನ್ನಲೆಯಲ್ಲಿ ಬೆಳಿಗ್ಗೆ ಬೆಂಗಳೂರಿನ ಕೆ.ಎಂ.ಎಫ್ ಕೇಂದ್ರ ಕಛೇರಿಯಲ್ಲಿ ಚುನಾವಣೆ ನಡೆಯಲಿದ್ದು, ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.