ಮುಂಬೈ : ಭಾರತದ ಮಾಜಿ ನಾಯಕ, ಕರ್ನಾಟಕದ ಕಣ್ಮಣಿ, 'ಜಂಬೋ' ಖ್ಯಾತಿಯ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ನೂತನ ತರಬೇತುದಾರನಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಬಿಸಿಸಿಐ ಸ್ಪಷ್ಟಪಡಿಸಿದೆ.
ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ತ್ರಿಸದಸ್ಯ ಸಲಹಾ ಸಮಿತಿ ಸಂದರ್ಶನದ ಮೂಲಕ ಕೋಚ್ ಆಯ್ಕೆಯನ್ನು ನಿರ್ಧರಿಸಿತ್ತು. ಸಲಹಾ ಸಮಿತಿ ಕೋಚ್ ಹುದ್ದೆ ಆಕಾಂಕ್ಷಿಗಳ ಸಂದರ್ಶನ ನಡೆಸಿ ಅದರ ವರದಿ ಮತ್ತು ತಮ್ಮ ಶಿಫಾರಸ್ಸನ್ನು ಬಿಸಿಸಿಐಗೆ ನೀಡಿತ್ತು.
ಬಿಸಿಸಿಐ ಆಹ್ವಾನಕ್ಕೆ ಸ್ಪಂದಿಸಿ ದೇಶ ವಿದೇಶಗಳಿಂದ ಒಟ್ಟು 57 ಮಂದಿ ಉಮೇದುವಾರರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಸಂಖ್ಯೆಯನ್ನು 21ಕ್ಕೆ ಇಳಿಸಲಾಗಿತ್ತು. ಇವರೆಲ್ಲರ ಸಂದರ್ಶನ ನಡೆಸಿದ ಸಮಿತಿ ಕುಂಬ್ಳೆಯೇ ಯೋಗ್ಯ ಆಯ್ಕೆ ಎಂಬ ವರದಿಯನ್ನು ಬಿಸಿಸಿಐಗೆ ಸಲ್ಲಿಸಿತ್ತು. ಒಂದು ವರ್ಷ ಕಾಲ ಕುಂಬ್ಳೆ ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಡೈರೆಕ್ಟರ್ ರವಿ ಶಾಸ್ತ್ರಿ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಕೋಚ್ ರೇಸ್ನಲ್ಲಿದ್ದ ಪ್ರಬಲ ಸ್ಪರ್ಧಿಗಳಾಗಿದ್ದರು.
ಮೂರೂ ಪ್ರಕಾರಗಳ ಕ್ರಿಕೆಟ್ನಲ್ಲಿ ಭಾರತವನ್ನು ವಿಶ್ವದ ನಂಬರ್ ವನ್ ತಂಡವನ್ನಾಗಿ ಮಾಡುವುದು ಹೇಗೆ ಎಂಬ ಪ್ರರ್ಶ್ನೆಯನ್ನು ಅಭ್ಯರ್ಥಿಗಳಿಗೆ ಕೇಳಲಾಗಿತ್ತು. ಎಲ್ಲರೂ ಕೆಲವೇ ನಿಮಿಷಗಳಲ್ಲಿ ತಮ್ಮ ಅಭಿಪ್ರಾಯವನ್ನು ವಿವರಿಸಿದರೆ, ಕುಂಬ್ಳೆ ಮಾತ್ರ ಒಂದು ಗಂಟೆ ಕಾಲ ತಮ್ಮ ಯೋಜನೆಯನ್ನು ಕೂಲಂಕಷವಾಗಿ ವಿವರಿಸಿದ್ದರು. ಇದು ಸಂದರ್ಶಕರ ಮೆಚ್ಚುಗೆಗೆ ಪಾತ್ರವಾಯಿತು.