ಕೋಲ್ಕತ್ತಾ : ಭಾರತವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲು 'ಟೀಮ್ ಇಂಡಿಯಾ' ಸ್ಪೂರ್ತಿಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯಶೀಲವಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಬರ್ನಾಪುರದಲ್ಲಿ 16,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಭಾರತದ ಉಕ್ಕು ಪ್ರಾಧಿಕಾರದ ನವೀನ ತಂತ್ರಜ್ಞಾನದ ಐಐಎಸ್ಸಿಒ ಉಕ್ಕು ಸ್ಥಾವರನ್ನು ದೇಶಕ್ಕೆ ಸಮರ್ಪಣೆ ಮಾಡಿ ಅವರು ಮಾತನಾಡಿದರು. ಭಾರತ-ಮತ್ತು ಬಾಂಗ್ಲಾದೇಶದ ನಡುವಿನ ಸಮಸ್ಯೆಯನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ 'ಟೀಮ್ ಇಂಡಿಯಾ' ಸ್ಪೂರ್ತಿಯೊಂದಿಗೆ ಒಪ್ಪಂದಗಳ ಮೂಲಕ ಬಗೆಹರಿಸಿಕೊಳ್ಳಬಹುದು. ದೇಶದೊಳಗಿನ ಸಮಸ್ಯೆಗಳನ್ನೂ ಇದೇ ಸ್ಪೂರ್ತಿಯಲ್ಲಿ ಸುಲಭವಾಗಿ ಬಗೆ ಹರಿಸಬಸುದು ಎಂದರು.
ನನ್ನ ಸರ್ಕಾರದ ಒಂದು ವರ್ಷದ ಆಡಳಿತದಲ್ಲಿ ಯಾವುದೇ ಹಗರಣ ವರದಿಯಾಗಿಲ್ಲ ಎಂದ ಅವರು, ರಾಜಕೀಯ ಭಿನ್ನಾಭಿಪ್ರಾಯಗಳು ಇರಲೇಬೇಕು ಆದರೆ ಅದು ಅಭಿವೃದ್ದಗೆ ಮಾರಕವಾಗಬಾರದು. ಬಹುಕಾಲದಿಂದ ಭಿನ್ನಾಭಿಪ್ರಾಯಗಳು ಅಭಿವೃದ್ದಿಯನ್ನು ಕುಂಠಿತಗೊಳಿಸಿವೆ ಎಂದು ವಿಷಾದ ವ್ಯಕ್ತ ಪಡಿಸಿದರು.