ಲಖ್ನೌ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ದಾಖಲಾಗಿದ್ದ ಎಫ್.ಐ.ಆರ್ ನ್ನು ಉತ್ತರ ಪ್ರದೇಶದ ನ್ಯಾಯಾಲಯ ತಿರಸ್ಕರಿಸಿದೆ.
2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದ ವಿಡಿಯೊ ತುಣುಕನ್ನು ಆಧರಿಸಿ ಮುಜಾಫರ್ನಗರ ಪೊಲೀಸರು ನ್ಯಾಯಾಲಯಕ್ಕೆ ಸೆ.10ರಂದು ಚಾರ್ಜ್ಶೀಟ್ ಸಲ್ಲಿಸಿದ್ದರು.
ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿಲ್ಲ, ಚಾರ್ಜ್ ಶೀಟ್ ಅನ್ನು ಐಪಿಸಿ ಸೆಕ್ಷನ್ 188ರ ಪ್ರಕಾರ ದಾಖಲಿಸಲು ಸಾಧ್ಯವಿಲ್ಲ, ಈ ಸೆಕ್ಷನ್ ಅಡಿಯಲ್ಲಿ ಖಾಸಗಿ ದೂರನ್ನು ಮಾತ್ರ ದಾಖಲಿಸಬಹುದು ಎಂದು ನ್ಯಾಯಾಲಯ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಆರೋಪಿ ಅಮಿತ್ ಶಾ ವಿರುದ್ಧ ಪೊಲೀಸರು ಬಂಧನ ವಾರೆಂಟ್ ಹೊರಡಿಸಿಲ್ಲ ಹಾಗೂ ಅವನ್ನು ಸಮರ್ಪಕ ವಿಚಾರಣೆಗೆ ಗುರಿಪಡಿಸಿಲ್ಲ ಈ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ತಿರಸ್ಕರಿಸುತ್ತಿರುವುದಾಗಿ ನ್ಯಾಯಾಲಯ ತಿಳಿಸಿದೆ. ನ್ಯಾಯಾಲಯ ಚಾರ್ಜ್ ಶೀಟ್ ತಿರಸ್ಕರಿಸಿರುವುದರಿಂದ ಮರು ತನಿಖೆ ನಡೆಯುವ ಸಾಧ್ಯತೆ ಇದೆ.
ಈ ತೀರ್ಪು ಎಸ್.ಪಿ. ನೇತೃತ್ವದ ಅಧಿಕಾರಾರೂಢ ಅಖಿಲೇಶ್ ಸರಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿದ್ದು, ಸಧ್ಯದಲ್ಲೇ ನಡೆಯುವ ಅಸೆಂಬ್ಲಿ ಉಪಚುನಾವಣೆಗೆ ಚಾರ್ಜ್ ಶೀಟ್ ನ್ನು ಒಂದು ಅಸ್ತ್ರವನ್ನಾಗಿ ಬಳಸುವ ತಂತ್ರ ವಿಫಲಗೊಂಡಂತಾಗಿದೆ.