ನವದೆಹಲಿ : 1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಮೇಲೆ ಪ್ರಭಾವ ಹಾಗೂ ಹಣ ದುರುಪಯೋಗ ಆರೋಪಡಿಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ವಿರುದ್ಧ ಮತ್ತೆ ಹೊಸ ಎಫ್.ಐ.ಆರ್ ದಾಖಲಿಸುವುದಿಲ್ಲ ಎಂದು ಸಿಬಿಐ ದೆಹಲಿ ಕೋರ್ಟ್ ಗೆ ತಿಳಿಸಿದೆ. ಈ ಪ್ರಕರಣದಲ್ಲಿ ಸಿಬಿಐ ಟೈಟ್ಲರ್ ಗೆ ಈಗಾಗಲೇ ಕ್ಲೀನ್ ಚಿಟ್ ಕೊಟ್ಟಿದೆ.
ಕಾಂಗ್ರೆಸ್ ಮುಖಂಡ ಟೈಟ್ಲರ್ ವಿರುದ್ಧ ಸೆಕ್ಷನ್ 193ರ(ಸುಳ್ಳು ಸಾಕ್ಷ್ಯ) ಅಡಿಯಲ್ಲಿ ಹಾಗೂ ಸೆಕ್ಷನ್ 195 ಎ(ಸುಳ್ಳು ಸಾಕ್ಷ್ಯ ನೀಡುವಂತೆ ವ್ಯಕ್ತಿಗೆ ಬೆದರಿಕೆ ಒಡ್ಡುವುದು) ಅಡಿಯಲ್ಲಿ ಮತ್ತೆ ಪ್ರಕರಣ ದಾಖಲಿಸುತ್ತೀರಾ ಎಂಬ ಕೋರ್ಟ್ ಪ್ರಶ್ನೆಗೆ ಸಿಬಿಐ ಈ ಉತ್ತರ ನೀಡಿದೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಬಳಿ ಈ ಸಂಬಂಧ ಕೋರ್ಟ್ ಪ್ರಶ್ನಿಸಿದಾಗ, ಟೈಟ್ಲರ್ ವಿರುದ್ಧ ಮತ್ತೆ ಎಫ್.ಐ.ಆರ್ ದಾಖಲಿಸುವುದಿಲ್ಲ ಎಂದು ಹೇಳಿದರು. ಈ ಪ್ರಕರಣದ ವಿಚಾರಣೆಯನ್ನು ಅಡಿಷನಲ್ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸೌರಭ್ ಪ್ರತಾಪ್ ಸಿಂಗ್ ಲಾಲೆರ್ ಜುಲೈ 30ಕ್ಕೆ ಮುಂದೂಡಿದ್ದಾರೆ.