ಲಖ್ನೌ : 'ಇರಾಕ್' ನಲ್ಲಿ ಉಂಟಾಗಿರುವ ಶಿಯಾ ಸುನ್ನಿ ಗಳ ನಡುವಿನ ಸಮರ ಉತ್ತರ ಪ್ರದೇಶಕ್ಕೂ ಕಾಲಿಟ್ಟಿದ್ದು ಸುನ್ನಿ ಸಂಘಟನೆ ಮುಖಂಡ ಅಲ್ ಬಾಗ್ದಾದಿ ತಲೆಗೆ ಶಿಯಾ ಸಂಘಟನೆ 5 ಕೋಟಿ ರೂ ಬಹುಮಾನ ಘೋಷಿಸಿದೆ. ಈ ಮೂಲಕ ಭಾರತದಲ್ಲೂ ಶಿಯಾ-ಸುನ್ನಿಗಳ ನಡುವೆ ಘರ್ಷಣೆ ಆರಂಭವಾಗುವ ಲಕ್ಷಣಗಳಿವೆ.
ಇತ್ತೀಚೆಗಷ್ಟೇ ಇರಾಕ್ ನ ಸುನ್ನಿ ಉಗ್ರರ ವಿರುದ್ಧ ಶಿಯಾಗಳು ನಡೆಸಿದ್ದ ಪ್ರತಿಭಟನೆಯಿಂದ ಉತ್ತರ ಪ್ರದೇಶ ಆತಂಕಕ್ಕೊಳಗಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಸುನ್ನಿ ಉಗ್ರ ಮುಖಂಡ ಅಲ್ ಬಾಗ್ದಾದಿ ತಲೆಗೆ ಶಿಯಾ ಸಂಘಟನೆ ಬೃಹತ್ ಮೊತ್ತದ ಬಹುಮಾನ ಘೋಷಿಸಿದೆ. ಇದಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಶಿಯಾ ಸುನ್ನಿಗಳ ಸಮರ ರಾಜಕೀಯ ಬಣ್ಣ ಪಡೆದಿತ್ತು. ಶಿಯಾ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದ್ದ ಶಾಂತಿ ಮೆರವಣಿಗೆಗೆ ಜಿಲ್ಲಾಡಳಿತ ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಶಿಯಾ ಸಂಘಟನೆ ಮುಖಂಡ ಮೌಲ್ವಿ ಮೌಲಾನಾ ಕಲ್ಬೆ ಜವಾದ್ ಹಾಗೂ ಉತ್ತರ ಪ್ರದೇಶ ಸಚಿವ ಆಜಂ ಖಾನ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇರಾಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಖಂಡಿಸಿ ಉತ್ತರ ಪ್ರದೇಶದಲ್ಲಿ ಶಿಯಾ ಸಂಘಟನೆ ಪ್ರತಿಭಟನೆ ನಡೆಸಿತ್ತು. ಅಲ್ಲದೇ ಭಾರತ ಶಿಯಾ ಹುಸೈನಿ ಫಂಡ್ ನಿಂದ ಐದು ಉಗ್ರ ಸಂಘಟನೆಯ ಪ್ರಮುಖರ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಶಿಯಾ ಸುನ್ನಿಗಳ ಸಮರ ತಾರಕಕ್ಕೇರುವ ಸಾಧ್ಯತೆಗಳಿವೆ.