ದೆಹಲಿ / ಸನಾ : 'ಯೆಮೆನ್' ನಲ್ಲಿ ಸಿಲುಕಿರುವ ಬಹುತೇಕ ಭಾರತೀಯರನ್ನು ರಕ್ಷಿಸಲಾಗಿರುವ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ನಡೆಸುತ್ತಿರುವ ರಕ್ಷಣಾ ಕಾರ್ಯಚರಣೆ ಏ.8ರಂದು ಮುಕ್ತಾಯಗೊಳ್ಳಲಿದೆ.
ಈವರೆಗೂ ಸುಮಾರು 4000 ಭಾರತೀಯರನ್ನು ಸುರಕ್ಷವಾಗಿ ವಾಪಸ್ ಕರೆತರಲಾಗಿದೆ. ಏ.7ರಂದು ಒಂದೇ ದಿನದಲ್ಲಿ ಸುಮಾರು 1000 ಭಾರತೀಯರನ್ನು ರಕ್ಷಣೆ ಮಾಡಲಾಗಿತ್ತು.ಈ ಮೂಲಕ ಕೇಂದ್ರ ಸರ್ಕಾರ ಯಮೆನ್ ಭಾರತೀಯರ ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.
ಇದೇ ವೇಳೆ ರಕ್ಷಿಸಲಾಗಿರುವ ಭಾರತೀಯರು ಭಾರತವನ್ನು ತಲುಪಲು, ಪಾಕಿಸ್ತಾನ ನೀಡಿರುವ ನೆರವನ್ನು ಸ್ವೀಕರಿಸಲು ಭಾರತ ಒಪ್ಪಿಗೆ ಸೂಚಿಸಿದೆ. ಕರಾಚಿಯಿಂದ ಭಾರತೀಯರಿಗಾಗಿ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದ್ದು, ಪಾಕಿಸ್ತಾನದ ನೌಕಾದಳದ ಹಡಗುಗಳ ಮೂಲಕ 11 ಜನ ಭಾರತೀಯರನ್ನು ಯೆಮೆನ್ ನಿಂದ ರಕ್ಷಿಸಲಾಗಿದೆ.
ಯೆಮೆನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸುಮಾರು 4100 ಭಾರತೀಯರು ತಮ್ಮನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಮನವಿ ಮಾಡಿದ್ದರು. ಇದೇ ವೇಳೆ ಹಲವು ವಿದೇಶಿ ನಾಗರಿಕರನ್ನೂ ಸಹ ಭಾರತ ಸರ್ಕಾರ ರಕ್ಷಿಸಿದ್ದು, ಭಾರತೀಯರು ಮಾತ್ರವಲ್ಲದೇ ತಮ್ಮ ಪ್ರಜೆಗಳನ್ನು ರಕ್ಷಿಸಿದ್ದಕ್ಕಾಗಿ ಬಾಂಗ್ಲಾದೇಶ, ಅಮೆರಿಕಾ, ಇರಾಕ್ ಸೇರಿದಂತೆ ಹಲವು ದೇಶಗಳೂ ಭಾರತದ ಯಶಸ್ವಿ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿವೆ.
ಯೆಮೆನ್ ನಲ್ಲಿ ಸಿಲುಕಿರುವ ತಮ್ಮ ನಾಗರಿಕರನ್ನೂ ರಕ್ಷಣೆ ಮಾಡಬೇಕೆಂದು ಸುಮಾರು 26ರಾಷ್ಟ್ರಗಳು ಭಾರತಕ್ಕೆ ಮನವಿ ಮಾಡಿದ್ದವು, ಮನವಿಯನ್ನು ಸ್ವೀಕರಿಸಿದ್ದ ಭಾರತ ಯು.ಎಸ್, ಬಾಂಗ್ಲಾ, ಇರಾಕ್ ಹಾಗೂ ಗಲ್ಫ್ ರಾಷ್ಟ್ರಗಳೂ ಸೇರಿದಂತೆ 26ರಾಷ್ಟ್ರಗಳ 232 ಜನರನ್ನು ರಕ್ಷಿಸಿದೆ. ಅಚ್ಚರಿಯೆಂದರೆ, ಪಾಕಿಸ್ತಾನ ತನ್ನ ನಾಗರಿಕರನ್ನು ರಕ್ಷಿಸಬೇಕೆಂದು ಮನವಿ ಸಲ್ಲಿಸದೇ ಇದ್ದರೂ ಸಹ ಭಾರತ ಸರ್ಕಾರ ಪಾಕಿಸ್ತಾನಿ ನಾಗರಿಕರನ್ನೂ ರಕ್ಷಿಸಿ ಮಾನವಿಯತೆ ಮೆರೆದಿದೆ.