ನವದೆಹಲಿ : ಒಂದೇ ಚೀನಾ ನೀತಿಯನ್ನು ಭಾರತ ಒಪ್ಪಿಕೊಳ್ಳಬೇಕದರೆ, ಚೀನಾ ಕೂಡ ಒಂದೇ ಭಾರತ ನೀತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಈ ಮೂಲಕ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಗೂ ಮೊದಲೇ ಭಾರತ ದ್ವಿಪಕ್ಷೀಯ ಮಾತುಕತೆ ವಿಚಾರದಲ್ಲಿ ಕಠಿಣ ನಿಲುವು ತಳೆದಿದೆ.
ಚೀನಾ, ಟಿಬೆಟ್ ಮತ್ತು ತೈವಾನ್ ವಿಚಾರಗಳನ್ನು ಎತ್ತಿದಾಗಲೆಲ್ಲ ನಾವು ಅವರ ಸಂವೇದನೆಗಳನ್ನು ಹಂಚಿಕೊಂಡಿದ್ದೇವೆ. ಹೀಗಾಗಿ ಅರುಣಾಚಲ ಪ್ರದೇಶ ಕುರಿತ ನಮ್ಮ ಸಂವೇದನೆಗಳನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು ಎಂದು ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಸ್ಪರ್ಧೆ ಮತ್ತು ಸಹಕಾರ ಹೊರತುಪಡಿಸಿ ಭಾರತ-ಚೀನಾ ಬಾಂಧ್ಯವ್ಯಗಳು ಉತ್ತಮವಾಗಿವೆ. ಕ್ಸಿ ಜಿನ್ ಪಿಂಗ್ ಅವರ ಭಾರತ ಭೇಟಿ ಉಭಯ ದೇಶಗಳ ನಡುವೆ ದೃಢ ಬಾಂಧವ್ಯಕ್ಕೆ ಮುನ್ನುಡಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಜಪಾನ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಸ್ತರಣಾವಾದ ಕುರಿತು ನೀಡಿದ ಹೇಳಿಕೆ ಚೀನಾ ಬಗ್ಗೆ ನೀಡಿದ ಹೇಳಿಕೆ ಎಂಬ ಚೀನಾ ಮಾಧ್ಯಗಳ ವರದಿ ವಿಚಾರವಾಗಿ ಮಾತನಾಡಿದ ಅವರು, ಮೋದಿ ನಿರ್ಧಿಷ್ಟವಾಗಿ ಯಾವುದೇ ದೇಶವನ್ನು ಹೆಸರಿಸಿಲ್ಲ, ಅದು ಮಾಧ್ಯಮಗಳ ವರದಿಯಷ್ಟೇ, ಅವರು 18ನೇ ಶತಮಾನದ ವಿಸ್ತರಣಾವಾದವನ್ನು ಉಲ್ಲೇಖಿಸಿದ್ದರು ಎಂದು ತಿಳಿಸಿದರು.