ಕೊಲ್ಕತ್ತಾ : ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಟರು ಶೀಘ್ರದಲ್ಲಿಯೇ ಜೈಲು ಪಾಲಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾರದಾ ಚಿಟ್ ಫಂಡ್ ಹಗರಣದಲ್ಲಿ 17 ಲಕ್ಷ ಜನ ವಂಚನೆಗೊಳಗಾಗಿದ್ದಾರೆ. ಆದಾಗ್ಯೂ ಮಮತಾ ಎಂದೂ ಅವರ ಪರ ಧ್ವನಿ ಎತ್ತಿಲ್ಲ. ಯಾಕೆಂದರೆ ಮಮತಾ ಬಂಟರೇ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಪ್ಪುಮಾಡಿದವರ ವಿರುದ್ಧ ನಿಮಗೆ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದಾದಲ್ಲಿ ಅಧಿಕಾರ ಬಿಟ್ಟು ಕೆಳಗಿಳಿಯಿರಿ. ತಪ್ಪು ಮಾಡಿದವರನ್ನು ನಾವು ಜೈಲಿಗೆ ಕಳುಹಿಸುತ್ತೇವೆ. ಹಗರಣದಲ್ಲಿ ಮಮತಾ ಕೂಡ ಭಾಗಿಯಾಗಿದ್ದು, ಅವರನ್ನೂ ತನಿಖೆಗೊಳಪಡಿಸಬೇಕು ಎಂದು ಗುಡುಗಿದ್ದಾರೆ.
ಈ ನಡುವೆ ಹಗರಣಕ್ಕೆ ಸಂಬಂಧಿಸಿದಂತೆ ಅವ್ಯವಹಾರದ ಹೆಚ್ಚಿನ ಲಾಭ ದೀದಿಗೆ ದೊರೆತಿದ್ದು, ಅವರನ್ನೂ ವಿಚಾರಣೆಗೊಳಪಡಿಸಬೇಕು ಎಂದು ಶಾರದಾ ಚಿಟ್ ಫಂಡ್ ಹಗರಣದ ಆರೋಪಿ ಕುನಾಲ್ ಘೋಷ್ ತಿಳಿಸಿದ್ದಾರೆ.