ಕೋಲ್ಕತ್ತಾ : ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಟಿಎಂಸಿ ನಾಯಕ ಮುಕುಲ್ ರಾಯ್ಗೆ ಸಮನ್ಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಟಿಎಂಸಿ ನಾಯಕರನ್ನು ಬಂಧಿಸಿರುವ ಸಿಬಿಐ ಇದೀಗ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಮುಕುಲ್ ರಾಯ್ ಅವರ ಹೆಸರು ಕೇಳಿಬಂದಿತ್ತು.
ಶಾರದಾ ಚಿಟ್ ಫಂಡ್ ಹಗರಣವನ್ನು ತನಿಖೆ ನಡೆಸುತ್ತಿರುವ ಸಿಬಿಐನ ಅಧಿಕಾರಿಗಳು, ಕಂಪನಿಯ ಮೇಲಧಿಕಾರಿ ಸುದೀಪ್ತ ಸೇನ್ ಅವರ ದೂರವಾಣಿ ಕರೆಗಳ ದಾಖಲೆಗಳನ್ನು ಪರಿಶೀಲಿಸುವ ವೇಳೆ ಸುದೀಪ್ತ ಸೇನ್ ಹಲವು ಬಾರಿ ಟಿಎಂಸಿ ನಾಯಕ ಮುಕುಲ್ ರಾಯ್ ಅವರೊಂದಿಗೆ ಮಾತನಾಡಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಮುಕುಲ್ ಅವರಿಗೆ ಸಿಬಿಐ ಅಧಿಕಾರಿಗಳು ಮೇಲ್ ಮೂಲಕ ಸಮನ್ಸ್ ಜಾರಿ ಮಾಡಿದ್ದಾರೆ.
ಶಾರದಾ ಗ್ರೂಪ್ ನಡೆಸುತ್ತಿರುವ ಚಿಟ್ ಫಂಡ್ ಸಮೂಹ ಸಂಸ್ಥೆಯಾಗಿರುವ ಶಾರದಾ ಗ್ರೂಪ್ ಮೀಡಿಯಾ ನಡೆಸುತ್ತಿದ್ದ ಪತ್ರಿಕೆ ಮತ್ತಿತರ ವಿಭಾಗಗಳ ಕೆಲಸಗಾರರಿಗೆ ವೇತನ ನೀಡಲಾಗಲಿಲ್ಲ.ಅಕ್ರಮ ವ್ಯವಹಾರಗಳ ಮೂಲಕ ಉದ್ಯೋಗಿಗಳನ್ನು ವಂಚಿಸಲಾಗುತ್ತಿದೆ ಎಂಬ ಮಾಹಿತಿ 2013ರಲ್ಲಿ ಬೆಳಕಿಗೆ ಬಂತು. ಅದೇ ವೇಳೆಗೆ ಬಂಗಾಳ, ಒಡಿಶಾ, ತ್ರಿಪುರಾ, ಜಾರ್ಖಂಡ್ ಮತ್ತು ಅಸ್ಸಾಂನ ಸಾವಿರಾರು ಜನರು ತಾವೂ ಹೂಡಿದ್ದ ಹಣ ವಾಪಸ್ ನೀಡುವಂತೆ ಆಗ್ರಹಿಸಿ ಶಾರದಾ ಚಿಟ್ ಫಂಡ್ ವಿರುದ್ಧ ಪ್ರತಿಭಟನೆಗಿಳಿದರು. ಈ ಆರೋಪಗಳ ಸಂಬಂಧ ಪಶ್ಚಿಮ ಬಂಗಾಳ ಸರಕಾರ ತನಿಖೆಗೆ ಆಯೋಗವನ್ನೂ ರಚಿಸಿತ್ತು. 2013ರ ಏಪ್ರಿಲ್ 23 ರಂದು ಶಾರದಾ ಗ್ರೂಪ್ ಅಧ್ಯಕ್ಷ ಸುದಿಪ್ತ ಸೇನ್ ಹಾಗೂ ಅವರ ಇಬ್ಬರು ನಿಕಟ ವರ್ತಿಗಳ ಸಹಿತ ಕಾಶ್ಮೀರದ ಸೊನ್ಮಾರ್ಗ್ನಲ್ಲಿ ಬಂಧಿಸಲಾಗಿತ್ತು.