ಬೆಂಗಳೂರು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿದ್ಯುತ್ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಯೋಜನೆಗಳ ಅನುಷ್ಠಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದರ ಜೊತೆಗೆ ಆದ್ಯತೆ ಮೇಲೆ ಕಾರ್ಯನಿರ್ವಹಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು ಬಿಜಾಪುರ ಜಿಲ್ಲೆಯ ಕುಡಗಿಯಲ್ಲಿ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ ವತಿಯಿಂದ ಆರಂಭಿಸಲಿರುವ ಮೊದಲ ಹಂತದ ಉಷ್ಣ ವಿದ್ಯುತ್ ಘಟಕವು 2015 ರ ಡಿಸೆಂಬರ್ನಲ್ಲಿ ಪ್ರಾರಂಭವಾಗಲಿದ್ದು 2016 ರ ಜೂನ್ ತಿಂಗಳಲ್ಲಿ ಹಾಗೂ 2 ನೇ ಘಟಕ 2016 ರ ಡಿಸೆಂಬರ್ ಅಂತ್ಯದಲ್ಲಿ ಮೂರನೇ ಘಟಕವು ಕಾರ್ಯಾರಂಭ ಮಾಡಲಿದೆ ಎಂದ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಗೆ ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂ. ಹೆಚ್ಚು ಹಣ ಖರ್ಚು ಮಾಡಲಿದೆ ಎಂದರು.
ಕುಡಗಿಯಲ್ಲಿ ಪ್ರಾರಂಭಿಸುವ ಉದ್ದೇಶಿಸಿರುವ ಉಷ್ಣ ವಿದ್ಯುತ್ ಘಟಕಕ್ಕೆ ಸುಮಾರು 3,445 ಎಕರೆ ಭೂ ಪ್ರದೇಶದ ಅಗತ್ಯವಿದ್ದು NTPC ಗೆ (ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ) ಈಗಾಗಲೇ 299 ಎಕರೆ ಭೂಮಿಯನ್ನು ನೀಡಲಾಗಿದ್ದು ಉಳಿದ ಭೂಮಿಯನ್ನು ನೀಡಲಾಗಿದ್ದು ಉಳಿದ ಭೂಮಿಯನ್ನು ಒಂದು ವಾರದೊಳಗಾಗಿ ಹಸ್ತಾಂತರಿಸಲಾಗುವುದು ಎಂದರು.
ಕುಡಗಿಯಲ್ಲಿ ಪ್ರಾರಂಭಿಸಲಿರುವ ವಿದ್ಯುತ್ ಘಟಕಗಳಿಂದ ಸುಮಾರು 4 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಹೊಂದಲಾಗಿದ್ದು ರಾಜ್ಯಕ್ಕೆ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ ಎಂದ ಇಂಧನ ಸಚಿವರು ಈ ಯೋಜನೆ ಪ್ರಾರಂಭದಿಂದಾಗಿ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಪರಿಸರಕ್ಕೆ ಹಾನಿ ಸೇರಿದಂತೆ ಮನುಕುಲದ ಮೇಲೆ ಮತ್ತು ಜನರ ಆರೋಗ್ಯ ಮೇಲೆ ಯಾವ ರೀತಿಯ ದುಷ್ಪ್ಪರಿಣಾಮ ಉಂಟಾಗುವುದಿಲ್ಲ ಎಂದರು.
ಈ ಯೋಜನೆ ಪ್ರಾರಂಭವಾಗುವುದರಿಂದ ಭೂಮಿ ನೀಡಿದವರೆಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು ಎಂದ ಸಚಿವರು ಈ ಭಾಗದ ರಕ್ಷಣೆ ದೃಷ್ಟಿಯಿಂದ ಸರ್ಕಲ್ ಇನ್ಸ್ಪೆಕ್ಟರ್ ಹುದ್ದೆ ಮಟ್ಟದಲ್ಲಿ ಪೊಲೀಸ್ ಠಾಣೆ ತೆರೆಯಲಾಗುವುದು. ಜೊತೆಗೆ ರಾಷ್ಟ್ರೀಯಹೆದ್ದಾರಿ ಸಂಖ್ಯೆ 13 ರಿಂದ 218 ರವರೆಗಿನ ಹಾಳಾಗಿರುವ ರಸ್ತೆ ದುರಸ್ತಿ ಮಾಡುವ ಕಾರ್ಯವನ್ನು ಪಿಡ್ಬ್ಲುಡಿ ಮಾಡಲಿದೆ ಎಂದರು.
ಈ ಯೋಜನೆ ಪ್ರಾರಂಭಕ್ಕೆ ಭೂಮಿ ನೀಡಿದ ಸ್ಥಳೀಯರಿಂದ ಘಟಕ ಪ್ರಾರಂಭಿಸಲು ಯಾವುದೇ ರೀತಿಯ ತೊಂದರೆ ಇಲ್ಲ ಎಂದ ಇಂಧನ ಸಚಿವರು ಕೆಲವು ಜನ ಮಾತ್ರ ಈ ಯೋಜನೆ ಪ್ರಾರಂಭದಿಂದ ಜನರ ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಜನರಲ್ಲಿರುವ ಈ ಭಾವನೆಯನ್ನು ದೂರ ಮಾಡಲು ಮತ್ತು ಈ ಘಟಕ ಪ್ರಾರಂಭದಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು ಅರಿವು ಮೂಡಿಸಲು ದೇಶದ ವಿವಿದೆಡೆಗಳಲ್ಲಿ ಸ್ಥಾಪಿಸಲಾಗಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಭೇಟಿ ಮಾಡಿಸಿ ಅಲ್ಲಿನ ವಾಸ್ತವಗಳನ್ನು ತಿಳಿಯಲು ಅನುಕೂಲಮಾಡಿ ಕೊಡುವ ದೃಷ್ಟಿಯಿಂದ ಪ್ರವಾಸ ಏರ್ಪಡಿಸಲು NTPCಗೆ ತಿಳಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.