ಹೈದ್ರಾಬಾದ್ : ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ವಾಗ್ದಾಳಿ ನಡೆಸಿದ್ದಾರೆ.
ಹೈದ್ರಾಬಾದ್ ನಲ್ಲಿ ನಡೆದ ಕ್ಯಾಬಿನೆಟ್ ಸಭೆ ಬಳಿಕ ಮಾತನಾಡಿದ ಆವರು, ಶ್ರೀಶೈಲಂ ಜಲ ವಿದ್ಯುತ್ ಯೋಜನೆ ಸ್ಥಗಿತ ಹಿನ್ನಲೆಯಲ್ಲಿ ಚಂದ್ರಬಾಬು ನಾಯ್ಡು ಅವರ ವಿರುದ್ಧ ಕಿಡಿಕಾರಿದರು. ಚಂದ್ರಬಾಬು ನಾಯ್ಡು ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಚಂದ್ರಬಾಬು ನಾಯ್ಡು ಆಂಧ್ರ ವಿಭಜನಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಒಪ್ಪಂದದ ಪ್ರಕಾರ ಆಂಧ್ರಪ್ರದೇಶ ತೆಲಂಗಾಣಕ್ಕೆ ಶೇ.53.89ರಷ್ಟು ವಿದ್ಯುತ್ ನೀಡಬೇಕು. ಆದರೆ ತೆಲಂಗಾಣ ವಿಚಾರವಾಗಿ ನಾಯ್ಡು ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ ಒಪ್ಪಂದದ ಪ್ರಕಾರ ವಿದ್ಯುತ್ ನೀಡದಿದ್ದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಯಲಸೀಮಾ ಭಾಗದಲ್ಲಿ ನೀರಿನ ಅಭಾವ ಉಂಟಾಗುತ್ತಿದ್ದು, ಶ್ರೀಶೈಲಂ ಜಲ ವಿದ್ಯುತ್ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೃಷ್ಣಾ ನ್ಯಾಯಾಧಿಕರಣಕ್ಕೆ ಪತ್ರ ಬರೆದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಟಿಆರ್ಎಸ್ ಕಾರ್ಯಕರ್ತರು ನಲ್ಗೊಂಡ ಮತ್ತು ನಿಜಾಮಾಬಾದಿನಲ್ಲಿರುವ ತೆಲುಗುದೇಶಂ ಪಕ್ಷ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.