ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರ ರಚನೆಯ ಯತ್ನಕ್ಕೆ ಚಾಲನೆ ದೊರೆತಿದೆ. ಬಿಜೆಪಿಗೆ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡುವ ಸಾಧ್ಯತೆಯಿದೆ. ಆದರೆ ಆಮ್ ಆದ್ಮಿ ಪಕ್ಷ ಮರು ಚುನಾವಣೆಗೆ ಪಟ್ಟು ಹಿಡಿದಿದೆ.
ರಾಜಧಾನಿಯಲ್ಲಿ ಮರು ಚುನಾವಣೆ ಅಗತ್ಯವಿದೆ. ಮೈತ್ರಿ ಸರ್ಕಾರದಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ ಎಂದು ಎ.ಎ.ಪಿ ಮುಖಂಡ ಮನೀಶ್ ಸಿಸೋಡಿಯಾ ಆಗ್ರಹಿಸಿದ್ದಾರೆ.
ಬಹುಮತದಿಂದ ಅಯ್ಕೆಯಾದ ಸರ್ಕಾರದಿಂದ ಭ್ರಷ್ಟಾಚಾರ ನಿರ್ಮೂಲನೆ, ಬೆಲೆ ಏರಿಕೆ ನಿಯಂತ್ರಣ ಸಾಧ್ಯ. ದೆಹಲಿಯಲ್ಲಿ ಮರು ಚುನಾವಣೆ ನಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಎ.ಎ.ಪಿ ನಾಯಕರು ಸಭೆ ನಡೆಸಿದ್ದಾರೆ. ಸಂಜೆ ಎ.ಎ.ಪಿ ನೇತಾರ ಅರವಿಂದ್ ಕೇಜ್ರಿವಾಲ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿಯಾಗಿ ಮರು ಚುನಾವಣೆ ನಡೆಸಲು ಸೂಚಿಸುವಂತೆ ಮನವಿ ಮಾಡಲಿದ್ದಾರೆ.
ಇನ್ನೊಂದೆಡೆ ಹೊಸದಾಗಿ ಚುನಾವಣೆ ಎದುರಿಸಲು ಮನಸ್ಸಿಲ್ಲದ ಬಿಜೆಪಿಯ ಬಹುತೇಕ ಶಾಸಕರು ಹಾಗೂ ಹಿರಿಯ ನಾಯಕರು ಸರ್ಕಾರ ರಚಿಸುವಂತೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ನಡುವೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವರಿಷ್ಠರನ್ನು ಭೇಟಿಯಾಗಿದ್ದು ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.