ಲಖ್ನೌ : 'ಉತ್ತರ ಪ್ರದೇಶ' ಗೋರಖ್ ಪುರದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮಿಲ್ಲತ್ ಬೀದರಿ ಮುಹಿಮ್ ಸಂಘಟನೆ ಒತ್ತಾಯಿಸಿದೆ.
ಯೋಗಿ ಆದಿತ್ಯನಾಥ್ ಕೋಮುಪ್ರಚೋದನೆ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂ.ಬಿ.ಎಂ.ಸಿ ಕಾರ್ಯದರ್ಶಿ ಜಾಸೀಮ್ ಮೊಹಮ್ಮದ್ ಒತ್ತಾಯಿಸಿದ್ದಾರೆ. ದೇಶದಲ್ಲಿ ಹಿಂದೂಗಳಿಂದಾಗಲೀ ಮುಸ್ಲಿಮರಿಂದಾಗಲೀ ಕೋಮುಗಲಭೆಗಳು ಸಂಭವಿಸುತ್ತಿಲ್ಲ. ಯೋಗಿ ಆದಿತ್ಯನಾಥ್ ರಂತಹ ರಾಜಕಾರಣಿಗಳು ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುತ್ತಿರುವ ಹಿನ್ನೆಲೆಯಲ್ಲಿ ಕೋಮುಗಲಭೆಗಳು ಹೆಚ್ಚಾಗುತ್ತಿವೆ ಎಂದು ಮುಸ್ಲಿಂ ಸಂಘಟನೆ ಆರೋಪಿಸಿದೆ.
ಲವ್ ಜಿಹಾದ್ ಹಾಗೂ ಮತಾಂತರದ ಬಗ್ಗೆ ಯೋಗಿ ಆದಿತ್ಯನಾಥ್ ನೀಡಿದ್ದ ಕೆಲವು ಹೇಳಿಕೆಗಳನ್ನು ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಓರ್ವ ಹಿಂದೂ ಯುವತಿಯನ್ನು ಇಸ್ಲಾಂ ಗೆ ಮತಾಂತರಗೊಳಿದರೆ 100 ಮುಸ್ಲಿಂ ಯುವತಿಯರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರಬೇಕು, ಒಂದು ವೇಳೆ ಲವ್ ಜಿಹಾದ್ ನಿಲ್ಲದೇ ಇದ್ದಲ್ಲಿ ಜಿಹಾದಿಗಳಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸುವುದಾಗಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಿಲ್ಲತ್ ಬೀದರಿ ಮುಹಿಮ್ ಸಂಘಟನೆ ಆದಿತ್ಯನಾಥ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಮಿಲ್ಲತ್ ಬೀದರಿ ಮುಹಿಮ್ ಸಂಘಟನೆಗೆ ಇನ್ನೂ ಅನೇಕ ಮುಸ್ಲಿಂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.