ನವದೆಹಲಿ : ಬಿಜೆಪಿ ಶಾಸಕ ಜಿತೇಂದ್ರ ಸಿಂಗ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದೆಹಲಿ ಶಾಹದರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜಿತೇಂದ್ರ ಸಿಂಗ್ ಮೇಲೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
ದುಷ್ಕರ್ಮಿಗಳು ಏಕಾಏಕಿ 4 ಸುತ್ತಿನ ಗುಂಡಿನ ದಾಳಿ ನಡೆಸಿರುವುದು ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.
ಸೆ.3ರ ಮುಂಜಾನೆ ವಿವೇಕ್ ವಿಹಾರ್ನಲ್ಲಿರುವ ಜಿತೇಂದ್ರ ಸಿಂಗ್ ಅವರ ನಿವಾಸಕ್ಕೆ ಆಗಮಿಸಿದ ದುಷ್ಕರ್ಮಿಗಳು, ಜಿತೇಂದ್ರ ಅವರು ಮನೆಯಿಂದ ಹೊರಬಂದ ಬಳಿಕ ಅವರ ಮೇಲೆ ಹಲ್ಲೆ ನಡೆಸಿ, ಗುಂಡು ಹಾರಿಸಿದ್ದಾರೆ. ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ವೈಯಕ್ತಿಕ ಅಥವ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಸೆ.1ರಂದು ಕೇರಳದಲ್ಲಿ ಆರ್.ಎಸ್.ಎಸ್ ಪದಾಧಿಕಾರಿಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು.