ಟೋಕಿಯೋ : ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವುದು ನಮ್ಮ ಕರ್ತವ್ಯ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಬಂಡವಾಳ ಹೂಡುವಂತೆ ಜಪಾನ್ ಉದ್ಯಮಿಗಳಿಗೆ ಕರೆ ನೀಡಿದ್ದಾರೆ.
5 ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇನ್ನೂ ಎರಡು ದಿನಗಳ ಕಾಲ ಜಪಾನ್ ನಲ್ಲಿರಲಿದ್ದಾರೆ. ಸೆ.1ರಂದು ಟೋಕಿಯೋದಲ್ಲಿ ಜಪಾನ್ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಉದ್ಯಮಿಗಳನ್ನುದ್ದೇಶಿಸಿ ಭಾಷಣ ಮಾಡಿದರು.
ವ್ಯಾಪಾರ ಕ್ಷೇತ್ರದ ಅಭಿವೃದ್ಧಿಯೇ ಕೇಂದ್ರ ಸರ್ಕಾರದ ಮಂತ್ರ, ಆರ್ಥಿಕತೆ ಮತ್ತು ರಕ್ಷಣಾ ಅಭಿವೃದ್ಧಿಯೇ ನಮ್ಮ ಅಜೆಂಡಾ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಜಪಾನ್ ಜತೆ ಸೇರಿ ಕೆಲಸ ಮಾಡಿದ್ದೇನೆ. ಭಾರತದಲ್ಲಿ ಜಪಾನ್ ಬ್ಯಾಂಕ್ ತೆರೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ಭಾರತದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದೆ. ಈ ತ್ರೈಮಾಸಿಕದಲ್ಲಿ ಜಿಡಿಪಿ ಶೇ.5.7ರಷ್ಟು ವೃದ್ಧಿಯಾಗಿದೆ. ಉತ್ತಮ ಆಡಳಿತಕ್ಕೆ ನಮ್ಮ ಮೊದಲ ಆದ್ಯತೆಯಾಗಿದ್ದು, ಜಪಾನ್ ಕೌಶಲ್ಯವನ್ನು ನಾವು ಅಳವಡಿಸಬೇಕೆಂದಿದ್ದೇವೆ. ಸಂಶೋಧನೆ, ಅಭಿವೃದ್ಧಿ ಕ್ಷೇತ್ರಗಳಲ್ಲಿ ಜಪಾನ್ ಜತೆ ಕೈಜೋಡಿಸುತ್ತೇವೆ ಎಂದರು.
ಭಾರತದ 125 ಕೋಟಿ ಜನತೆ ಬದಲಾವಣೆ ಬಯಸಿದ್ದಾರೆ. ಬದಲಾವಣೆ ಹಲವು ಅವಕಾಶಗಳಿಗೆ ದಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಅನೇಕ ಕ್ಷೇತ್ರಗಳಲ್ಲಿ ಜಪಾನ್ ಕೌಶಲ್ಯ ಅಳವಡಿಕೆ ಮಾಡುತ್ತಿದ್ದು, ರಕ್ಷಣೆ, ಇಂಧನ, ಮೂಲಸೌಕರ್ಯದಂತಹ ಪ್ರಮುಖವಾಗಿ ಈ ಮೂರು ಕ್ಷೇತ್ರಗಳಲ್ಲಿ ಜಪಾನ್ ಕೌಶಲ್ಯಾಭಿವೃದ್ಧಿ ಅಳವಡಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಭಾರತದಲ್ಲಿ ಬಂಡವಾಳ ಹೂಡಲು ಕರೆ ನೀಡಿದ ಪ್ರಧಾನಿ ಮೋದಿ, ಜಪಾನ್ ಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಭಾರತದ ಪ್ರಧಾನಿ ಕಾರ್ಯಾಲಯ ಒದಗಿಸಿಸುತ್ತದೆ. ಉದ್ಯಮಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ. ಅದಕ್ಕೆ ನಾವು ಬದ್ಧರಿದ್ದೇವೆ. ತಂತ್ರಜ್ನಾನಾಧಾರಿತ ಆಡಳಿತ ನೀಡುವ ಅಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.
21ನೇ ಶತಮಾನದ ಅಭಿವೃದ್ಧಿ ಏಷ್ಯಾದ್ದೆಂದು ಇಡೀ ವಿಶ್ವವವೇ ಒಪ್ಪಿಕೊಳ್ಳಬೇಕು. ವಿಶ್ವದ ಆರ್ಥಿಕ ಬೆಳವಣಿಗೆಗೆ ನಾವು ದಾರಿ ತೋರಬೇಕು. ಜಪಾನ್ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಭಾರತದೊಂದಿಗೆ ಕೈಜೋಡಿಸುವ ವಿಶ್ವಾಸವಿದೆ. ಈ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯೋಣ ಎಂದರು.