ಚೆನ್ನೈ : 'ಭಗವದ್ಗೀತೆ'ಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸಬೇಕೆಂಬ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪ್ರಸ್ತಾವನೆಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತ ಜಾತ್ಯಾತೀತ ರಾಷ್ಟ್ರವಾಗಿರುವುದರಿಂದ ಭಾರತದಲ್ಲಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸಬಾರದು ಎಂದು ಕರುಣಾನಿಧಿ ಹೇಳಿದ್ದಾರೆ. ಸಂವಿಧಾನದಲ್ಲಿ ಭಾರತ ಜಾತ್ಯಾತೀತ ರಾಷ್ಟ್ರ ಎಂದು ಘೋಷಿಸಲಾಗಿದೆ. ಅಂತೆಯೇ ಕೇಂದ್ರ ಸರ್ಕಾರ ಭಾರತದಲ್ಲಿರುವ ಎಲ್ಲಾ ಧರ್ಮಗಳಿಗೆ ಸಮವಾದ ಸ್ಥಾನಮಾನ ನೀಡಬೇಕು. ಹಾಗೂ ಜಾತ್ಯಾತೀತ ತತ್ವವನ್ನು ಪಾಲಿಸಬೇಕೆಂದು ಕರುಣಾನಿಧಿ ಹೇಳಿದ್ದಾರೆ.
ದೇಶವನ್ನು ಅಭಿವೃದ್ಧಿ ಮಾಡುವ ಗುರಿಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಇಂತಹ ವಿವಾದಾತ್ಮಕ ನಿರ್ಣಯಗಳಿಂದ ಅಂತರ ಕಾಯ್ದುಕೊಳ್ಳಬೇಕೆಂದು ಕರುಣಾನಿಧಿ ಮೋದಿಗೆ ಸಲಹೆ ನೀಡಿದ್ದಾರೆ.
ಜಪಾನ್ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ಪ್ರಧಾನಿಗೆ ನರೇಂದ್ರ ಮೋದಿ ಅವರು ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದರು. ಅಲ್ಲದೇ ವಿದೇಶ ಪ್ರವಾಸ ಕೈಗೊಂಡಾಗಲೆಲ್ಲಾ ಮೋದಿ ಆ ದೇಶದ ಗಣ್ಯ ವ್ಯಕ್ತಿಗಳಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕ್ರಮವನ್ನು ಸ್ವಾಗತಿಸಿದ್ದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್,
ಮಹಾಭಾರತ ಯುದ್ಧದ ವೇಳೆ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ "ಭಗವದ್ಗೀತೆ"ಯನ್ನ ರಾಷ್ಟ್ರೀಯ ಪವಿತ್ರ ಗ್ರಂಥವಾಗಿ ಘೋಷಿಸಬೇಕೆಂದು ಹೇಳಿದ್ದರು.
ಪ್ರತಿಯೊಬ್ಬ ವ್ಯಕ್ತಿಯ ಸಮಸ್ಯೆಗಳಿಗೂ ಗೀತೆಯಲ್ಲಿ ಸಮಾಧಾನವಿದೆ. ಇದನ್ನ ಭಾರತದ ರಾಷ್ಟ್ರೀಯ ಪವಿತ್ರ ಗ್ರಂಥವಾಗಿ ಘೋಷಿಸುವುದು ಸೂಕ್ತ ಎಂದು ಸುಷ್ಮಾ ಸ್ವರಾಜ್ ಒತ್ತಾಯಿಸಿದ್ದಾರೆ.