ನವದೆಹಲಿ : 'ಭಗವದ್ಗೀತೆ'ಗೆ ರಾಷ್ಟ್ರೀಯ ಗ್ರಂಥವಾಗಬೇಕೆಂಬ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಬೇಡಿಕೆಗೆ ವಿಶ್ವಹಿಂದೂ ಪರಿಷತ್ ಬೆಂಬಲ ವ್ಯಕ್ತಪಡಿಸಿದೆ.
ಸುಷ್ಮಾ ಸ್ವರಾಜ್ ಹೇಳಿಕೆ ಬಗ್ಗೆ ಡಿ.10ರಂದು ಪ್ರತಿಕ್ರಿಯಿಸಿರುವ ವಿಶ್ವಹಿಂದೂ ಪರಿಷತ್ ನ ಮುಖಂಡರೊಬ್ಬರು, ಭಗವದ್ಗೀತೆ ಭಾರತದ ರಾಷ್ಟ್ರೀಯ ಗ್ರಂಥವಾಗಬೇಕು ಎಂದಿದ್ದಾರೆ. ಗೀತೆ ಪ್ರಪಂಚದಲ್ಲೇ ಉತ್ಕೃಷ್ಟ ಗ್ರಂಥವಾಗಿದ್ದು ಭಾರತದ ರಾಷ್ಟ್ರೀಯ ಗ್ರಂಥವಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಹೇಳಿಕೆಗೆ ಕರುಣಾನಿಧಿ ಸೇರಿದಂತೆ ಹಲವು ರಾಜಕಾರಣಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಭಾರತ ಜಾತ್ಯಾತೀತ ರಾಷ್ಟ್ರವಾಗಿರುವುದರಿಂದ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸಬಾರದು ಎಂದು ವಿರೋಧ ವ್ಯಕ್ತವಾಗಿತ್ತು.
ಈಗ ವಿಶ್ವಹಿಂದೂ ಪರಿಷತ್ ಸುಷ್ಮಾ ಸ್ವರಾಜ್ ಹೇಳಿಕೆಯನ್ನು ಬೆಂಬಲಿಸಿ, ಮೋದಿ ಸರ್ಕಾರ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸಲಿ ಎಂದು ಹೇಳಿದೆ.